ಚಂಡೀಗಢ: ಕಳೆದ 14 ವರ್ಷಗಳಿಂದ ಬರಿಗಾಲಿನಲ್ಲೇ ತಿರುಗಾಡುತ್ತಿದ್ದ ಅಭಿಮಾನಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೂಗಳನ್ನು ತೊಡಿಸುವ ಮೂಲಕ ಅವರ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ. ಹರಿಯಾಣದ ಯಮುನಾ ನಗರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ (Narendra Modi) ಅವರು ಕೈತಾಲ್ ನವರಾದ ರಾಂಪಾಲ್ ಕಶ್ಯಪ್ ಎಂಬುವರಿಗೆ ಬೂಟುಗಳನ್ನು ತೊಡಿಸುವ ಮೂಲಕ ಅವರ ಪ್ರತಿಜ್ಞೆ ಈಡೇರಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರಾಂಪಾಲ್ ಕಶ್ಯಪ್ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗುವವರೆಗೆ ಹಾಗೂ ಅವರನ್ನು ಭೇಟಿಯಾಗುವವರೆಗೆ ಶೂ, ಚಪ್ಪಲಿಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಹಾಗಾಗಿ, ರಾಂಪಾಲ್ ಅವರನ್ನು ನರೇಂದ್ರ ಮೋದಿ ಅವರು ಭೇಟಿಯಾದರು. ಇದೇ ವೇಳೆ ಮೋದಿಯವರೇ ರಾಂಪಾಲ್ ಅವರ ಕಾಲುಗಳಿಗೆ ಶೂಗಳನ್ನು ಹಾಕುವ ಮೂಲಕ ಔದಾರ್ಯ ಮೆರೆದರು. ಇದೇ ವೇಳೆ ರಾಂಪಾಲ್ ಅವರು ಭಾವುಕರಾಗಿದ್ದರು.
ಅಭಿಮಾನಿಯನ್ನು ಭೇಟಿಯಾದ ಬಳಿಕ ನರೇಂದ್ರ ಮೋದಿ ಅವರು ಎಕ್ಸ್ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. “ಹರಿಯಾಣದ ಯಮುನಾ ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡೆ. ಇದೇ ವೇಳೆ ನಾನು ಕೈತಾಲ್ ನ ರಾಂಪಾಲ್ ಅವರನ್ನು ಭೇಟಿಯಾದೆ. ನಾನು ಪ್ರಧಾನಿಯಾಗುವತನಕ ಹಾಗೂ ನನ್ನನ್ನು ಭೇಟಿಯಾಗುವತನಕ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ಇವರ ಪ್ರೀತಿಗೆ ನಾನು ಯಾವಾಗಲೂ ಆಭಾರಿ” ಎಂದು ಬರೆದುಕೊಂಡಿದ್ದಾರೆ.
“ರಾಂಪಾಲ್ ಅಂತಹವರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ, ಇಂತಹ ಪ್ರತಿಜ್ಞೆ ಮಾಡುವ ಬದಲಾಗಿ ಸಮಾಜಸೇವೆ ಹಾಗೂ ರಾಷ್ಟ್ರ ನಿರ್ಮಾಣದ ಸಂಕಲ್ಪ ಮಾಡಬೇಕು ಎಂಬುದಾಗಿ ನಾನು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ. ರಾಂಪಾಲ್ ಅವರನ್ನು ಭೇಟಿಯಾಗುತ್ತಲೇ ಮೋದಿ ಅವರು, “ಇಷ್ಟು ದಿನ ಏಕೆ ಸುಮ್ಮನಿದ್ದಿರಿ? ನೀವೇ ತೊಂದರೆ ತೆಗೆದುಕೊಳ್ಳಲು ಹೋದಿರಿ” ಎಂದು ಪ್ರಶ್ನಿಸಿದರು. ಹಾಗೆಯೇ, ಇಂತಹ ಪ್ರತಿಜ್ಞೆಗಳನ್ನು ಭವಿಷ್ಯದಲ್ಲಿ ಮಾಡಬೇಕು ಎಂದು ಕೂಡ ಮೋದಿ ವಿನಂತಿಸಿದರು.