ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತವು ಎಷ್ಟು ವಿಮಾನಗಳನ್ನು ಕಳೆದುಕೊಂಡವು ಎಂದು ಪ್ರಶ್ನಿಸಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಿಜೆಪಿ “ಆಧುನಿಕ ಕಾಲದ ಮೀರ್ ಜಾಫರ್” ಎಂದು ಕರೆದಿದೆ. ತಮ್ಮ ಹೇಳಿಕೆಗಳ ಮೂಲಕ ರಾಹುಲ್ ಗಾಂಧಿ ಅವರು ಪಾಕಿಸ್ತಾನಕ್ಕೆ ನೆರವಾಗುತ್ತಿದ್ದಾರೆ ಎಂದೂ ಆರೋಪಿಸಿದೆ.
ರಾಹುಲ್ ಗಾಂಧಿಯವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನೇ ಬಳಸಿಕೊಂಡು ಪಾಕಿಸ್ತಾನಿ ಮಾಧ್ಯಮಗಳು ತಮ್ಮ ಸುಳ್ಳುಗಳನ್ನು ಹಬ್ಬಿಸುತ್ತಿವೆ. ಅವುಗಳನ್ನೇ ಭಾರತದ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
ಇದೇನೂ ಹೊಸದಲ್ಲ. ಈ ಹಿಂದೆಯೂ ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವಲ್ಲಿ ತಮ್ಮ ಪಾತ್ರವನ್ನು ಮುಚ್ಚಿಡುವ ಸಲುವಾಗಿ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳನ್ನೇ ಬಳಸಿಕೊಂಡಿತ್ತು. ಗಡಿಯಾಚೆಗಿನ ಭಯೋತ್ಪಾದನೆ ನಡೆಸುವವರಿಗೆ ರಾಹುಲ್ ಅವರ ಮಾತುಗಳೇ ರಕ್ಷಾ ಕವಚವಾಗಿವೆ ಎಂದೂ ಮಾಳವೀಯ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಪಾಕಿಸ್ತಾನಿ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಪೋಸ್ಟ್ ಪ್ರಸಾರವಾಗುತ್ತಿರುವ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಅಲ್ಲದೇ, ರಾಹುಲ್ ಹೊಸ ಯುಗದ ಮೀರ್ ಜಾಫರ್ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿಯವರು ಪಾಕಿಸ್ತಾನದ ಭಾಷೆ ಮಾತನಾಡುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾರತದ ಪ್ರಭಾವವನ್ನು ಪ್ರದರ್ಶಿಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಅಭಿನಂದಿಸಿಲ್ಲ. ಬದಲಿಗೆ ಅವರು ಪದೇ ಪೇದೆ ನಮ್ಮ ಎಷ್ಟು ಯುದ್ಧ ವಿಮಾನಗಳು ನಾಶವಾದವು ಎಂದೇ ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಈ ಪ್ರಶ್ನೆಗೆ ಡಿಜಿಎಂಒಗಳು ಉತ್ತರ ನೀಡಿದ್ದಾರೆ ಎಂದೂ ಮಾಳವೀಯ ಆರೋಪಿಸಿದ್ದಾರೆ. ಅಲ್ಲದೇ, ಇಂಥ ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ಗೆ ಏನು ಸಿಗುತ್ತದೆ? ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ನಿಶಾನ್-ಎ-ಪಾಕಿಸ್ತಾನ್ ಸಿಗಬಹುದೇ ಎಂದೂ ಬಿಜೆಪಿ ನಾಯಕ ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.