ಚಿತ್ರದುರ್ಗ: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ನಡುವೆ ಭದ್ರಾ ವಿವಾದವೆದ್ದಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ದ ಬಿಜೆಪಿ ಶಾಸಕ ಕೆ.ಎಸ್. ನವೀನ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ನಮ್ಮ ಪಕ್ಷದ ಕೆಲವರು ವಿರೋಧ ಮಾಡುತ್ತಿದ್ದಾರೆ. ನಾವು ಇದನ್ನ ತೀವ್ರವಾಗಿ ಖಂಡಿಸುತ್ತೇನೆ. 2021 ರಲ್ಲಿ ಈ ಯೋಜನೆಯ ಆದೇಶ ಮಾಡಿದ್ದು ಬಿಜೆಪಿ ಸರ್ಕಾರ. ತರಿಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದನ್ನು ನೀಗಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಯೋಜನೆ ಜಾರಿಗೆ ತಂದಿದ್ದರು.
ಆದರೆ, ಈಗ ರಾಜಕೀಯ ಉದ್ಧೇಶದಿಂದಾಗಿ ರೇಣುಕಾರ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು. ದಾವಣಗೆರೆ ಜಿಲ್ಲೆಯ ರೈತರ ಪರ ನಾನು ಇದ್ದೇನೆ. ಕುಡಿಯುವ ನೀರಿನ ಯೋಜನೆ ಪರ ಎಲ್ಲಾ ಪಕ್ಷದವರು ಸೇರಿ ಹೊಸದುರ್ಗ ಬಂದ್ ಮಾಡಿದ್ದೇವೆ. ಯಥಾವತ್ತಾಗಿ ಯೋಜನೆ ಜಾರಿ ಮಾಡಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ.
ಹೋರಾಟಕ್ಕೆ ಇಳಿಯುವ ಮುನ್ನ ರೇಣುಕಾಚಾರ್ಯ ಯೋಚನೆ ಮಾಡಬೇಕಿತ್ತು. ಅವತ್ತು ಅವರು ಕೂಡ ಶಾಸಕರಾಗಿದ್ದರು. 350 ಕೋಟಿ ರೂ. ಯೋಜನೆ ಸಂಪುಟದಲ್ಲಿ ಅನುಮೋದನೆ ಆದಾಗ ಅವರು ಶಾಸಕರಾಗಿದ್ದರು. ಆದರೆ, ಸೋತಿದ್ದರಿಂದ ಕ್ಷೇತ್ರದಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳಲು ರಾಜಕೀಯ ಮಾಡಲಾಗುತ್ತಿದೆ. ಆದರೆ, ಒಳ್ಳೆಯ ಕೆಲಸ ಮಾಡಿ ಜನರ ಮನ ಗೆಲ್ಲಬೇಕು. ಪಕ್ಕದ ಜಿಲ್ಲೆಯ ಯೋಜನೆ ಕುರಿತು ಹೋರಾಟ ಮಾಡಿ ನಗೆಪಾಟಲಿಗೆ ಈಡಾಗಬೇಡಿ ಎಂದು ಮನವಿ ಮಾಡಿದ್ದಾರೆ.