ಚೆನ್ನೈ: ಭಾಷೆ, ತೆರಿಗೆ ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ(TamilNadu vs Central Govt) ಮುಂದುವರಿದಿರುವಂತೆಯೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ, ರಾಜ್ಯದ ಸ್ವಾಯತ್ತೆಗಾಗಿ ಮಂಗಳವಾರ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
“ರಾಜ್ಯದ ಹಕ್ಕುಗಳನ್ನು ರಕ್ಷಿಸಲು ಮತ್ತು ಕೇಂದ್ರ- ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ಹೆಚ್ಚಿಸಲು, ಈ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಹೆಚ್ಚಿನ ಅಧ್ಯಯನ ನಡೆಸಿ, ಶಿಫಾರಸುಗಳನ್ನು ನೀಡಲಿದೆ” ಎಂದು ತಮಿಳುನಾಡು ವಿಧಾನಸಭೆಯಲ್ಲಿ ನಿಯಮ 110 ರ ಅಡಿಯಲ್ಲಿ ಸಿಎಂ ಸ್ಟಾಲಿನ್ ಘೋಷಿಸಿದ್ದಾರೆ.
ನಿಯಮ 110ರ ಅನ್ವಯ, ಪ್ರತಿಪಕ್ಷಗಳಿಗೆ ಪ್ರತಿಕ್ರಿಯಿಸಲು ಅಥವಾ ತಮ್ಮ ಅಭಿಪ್ರಾಯವನ್ನು ನೀಡಲು ಯಾವುದೇ ಅವಕಾಶವನ್ನು ನೀಡದೇ ಮುಖ್ಯಮಂತ್ರಿ ಅಥವಾ ಸಚಿವರು ವಿಧಾನಸಭೆಯಲ್ಲಿ ಹೇಳಿಕೆ ಅಥವಾ ಘೋಷಣೆ ಮಾಡುವ ಅನುಮತಿಯನ್ನು ನೀಡುತ್ತದೆ. ಈ ಮೂಲಕ ಪ್ರತಿಪಕ್ಷಗಳು ಯಾವುದೇ ನ್ಯೂನತೆಗಳನ್ನು ಎತ್ತಿ ತೋರಿಸದಂತೆ ಅಥವಾ ಆರಂಭದಲ್ಲಿಯೇ ಆಕ್ಷೇಪಣೆಗಳನ್ನು ಎತ್ತದಂತೆ ತಡೆಯುತ್ತದೆ.
ಮಾಜಿ ಅಧಿಕಾರಿಗಳಾದ ಅಶೋಕ್ ಶೆಟ್ಟಿ ಮತ್ತು ಎಂ.ಯು.ನಾಗರಾಜನ್ ಅವರೂ ಈ ಸಮಿತಿಯಲ್ಲಿದ್ದು, 2026ರ ಜನವರಿಯಲ್ಲಿ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ. ವಿಸ್ತೃತ ಶಿಫಾರಸುಗಳನ್ನು ಒಳಗೊಂಡ ಅಂತಿಮ ವರದಿಯನ್ನು ಎರಡು ವರ್ಷಗಳಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಮೂಲತಃ ರಾಜ್ಯ ಸರ್ಕಾರಗಳ ಏಕೈಕ ಅಧಿಕಾರ ವ್ಯಾಪ್ತಿಯಲ್ಲಿದ್ದ, ಆದರೆ ಈಗ ರಾಜ್ಯ ಮತ್ತು ಕೇಂದ್ರವು ಜಂಟಿಯಾಗಿ ನಿರ್ವಹಿಸುತ್ತಿರುವ ಆಡಳಿತ ಮತ್ತು ನೀತಿ ನಿರೂಪಣೆಯ ವಿಷಯವನ್ನು ಮರಳಿ ರಾಜ್ಯಗಳ ವ್ಯಾಪ್ತಿಗೆ ಬರುವಂತೆ ಮಾಡುವ ಮಾರ್ಗಗಳನ್ನು ಸೂಚಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ.
ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಗುರಿಯಾಗಿದೆ ಎಂದೂ ಸ್ಟಾಲಿನ್ ಇದೇ ವೇಳೆ ಘೋಷಿಸಿದ್ದಾರೆ. ಇದಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಸ್ಟಾಲಿನ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬಗ್ಗೆ ತಮ್ಮ ತೀಕ್ಷ್ಣ ಟೀಕೆಯನ್ನು ಮುಂದುವರಿಸಿದ್ದಾರೆ. ಕೇಂದ್ರವು ಭಾಷಾ ಹೇರಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಿದ ಅವರು, ದೇಶಾದ್ಯಂತ ಹಿಂದಿ ಭಾಷೆಯನ್ನು ಉತ್ತೇಜಿಸಲು ಎನ್ಇಪಿಯನ್ನು ಸಾಧನವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ತಮಿಳುನಾಡು ನಿರಾಕರಿಸಿದ್ದಕ್ಕೆ ಶಿಕ್ಷೆಯೆಂಬಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರಬೇಕಿದ್ದ 2,500 ಕೋಟಿ ರೂ.ಗಳ ಹಣವನ್ನು ತಡೆಹಿಡಿದಿದೆ ಎಂದೂ ಆರೋಪಿಸಿದ್ದಾರೆ.
“ನೀಟ್ ಪರೀಕ್ಷೆ ಜಾರಿಯಿಂದಾಗಿ ನಾವು ಅನೇಕ ವಿದ್ಯಾರ್ಥಿಗಳನ್ನು ಕಳೆದುಕೊಂಡೆವು. ನಾವು ನೀಟ್ ಪರೀಕ್ಷೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದೇವೆ. ತ್ರಿಭಾಷಾ ನೀತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ. ನಾವು ಎನ್ಇಪಿಯನ್ನು ನಿರಾಕರಿಸಿದ್ದರಿಂದ, ಕೇಂದ್ರ ಸರ್ಕಾರವು ರಾಜ್ಯಕ್ಕೆ 2500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ” ಎಂದೂ ಅವರು ಹೇಳಿದ್ದಾರೆ.