ವಿಜಯಪುರ: ರಾಜ್ಯದಲ್ಲಿ ಪವರ್ ಶೇರಿಂಗ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಆಗಮಿಸುತ್ತಿದ್ದು, ಈ ವಿಷಯವಾಗಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜ್ಯಕ್ಕೆ ಆಗಮಿಸುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಉಸ್ತುವಾರಿಗಳು ರಾಜ್ಯಕ್ಕೆ ಬರಬೇಕು. ಅದು ಅವರ ಕರ್ತವ್ಯ. ಅವರ ಆಗಾಗ ರಾಜ್ಯಕ್ಕೆ ಆಗಮಿಸಿ, ಸಭೆಗಳನ್ನು ನಡೆಸುತ್ತಾರೆ. ಅದು ಅವರ ರೂಟಿನ್ ಕೆಲಸ. ಯಾವುದೇ ಅಸಮಾಧಾನ ಹೊರಹಾಕಿದ್ದಕ್ಕೆ ಅವರು ಬರುತ್ತಿಲ್ಲ. ರಾಜ್ಯಕ್ಕೆ ಆಗಮಿಸಿದ ವೇಳೆ ಅವರು ಎಲ್ಲರ ಅಭಿಪ್ರಾಯ ಕೇಳುತ್ತಾರೆ. ಸರ್ಕಾರ ಯಾವ ರೀತಿ ನಡೆದಿದೆ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹ ಸೇರಿದಂತೆ ಅನೇಕ ವಿಷಯಗಳನ್ನು ರಿವೀಲ್ ಮಾಡುತ್ತಿರುತ್ತಾರೆ ಎಂದಿದ್ದಾರೆ.
ದಸರಾ ಒಳಗೆ ಸಿಎಂ ಬದಲಾಗುತ್ತಾರೆಂಬ ಆರ್.ಅಶೋಕ್ ವಿಚಾರವಾಗಿ ಮಾತನಾಡಿದ ಅವರು, ಆರ್ ಅಶೋಕ ಅವರು ಮೊದಲು ತಮ್ಮ ಕುರ್ಚಿ ಉಳಿಸಿಕೊಳ್ಳಲಿ. ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಕುಳಿತಿದ್ದಾರೆ ಆರ್.ಅಶೋಕ್. ದಸರಾದ ಒಳಗೆ ಅವರ ಕುರ್ಚಿ ಬದಲಾವಣೆ ಆಗುವ ವಿಷಯವಾಗಿ ಅವರೇ ಮಾತನಾಡಬೇಕು. ತಮ್ಮ ಕುರ್ಚಿಯೇ ಗಟ್ಟಿ ಇಲ್ಲ. ಮತ್ತೊಬ್ಬರ ಕುರ್ಚಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.