ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಆನಂತರ ಸಂಭ್ರಮಾಚರಣೆಗಾಗಿ ಆರ್ ಸಿಬಿ ತಂಡ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ಭೀಕರ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಮೆಟ್ರೋ ಕೂಡ ವಿಷಾದ ವ್ಯಕ್ತಪಡಿಸಿದೆ. ಅಲ್ಲದೇ, ಆ ದಿನ ದಾಖಲೆಯ ಎಂಬಂತೆ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಮೆಟ್ರೋ, ನಿನ್ನೆ ಸಂಭವಿಸಿದ ದುರದೃಷ್ಟಕರ ಘಟನೆಯಿಂದ ನಾವು ಅತೀವವಾಗಿ ದುಃಖಿತರಾಗಿದ್ದೇವೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ನಾವು ಶೋಕಾಚರಣೆ ಮಾಡುತ್ತೇವೆ. ಈ ದುರಂತದಿಂದ ಬಾಧಿತರಾದ ಕುಟುಂಬಗಳಿಗೆ ನಮ್ಮ ಹೃದಯಪೂರ್ವಕ ಸಂತಾಪವನ್ನು ಸೂಚಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ.
ನಿನ್ನೆ ಒಂದೇ ದಿನ ಮೆಟ್ರೋದಲ್ಲಿ 9,66,732 ಜನರು ಪ್ರಯಾಣ ಮಾಡುವ ಮೂಲಕ ನಮ್ಮ ಮೆಟ್ರೋ ಹೊಸ ದಾಖಲೆ ಬರೆದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಾರ, ಎಂದಿಗಿಂತ ನಿನ್ನೆ ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿತ್ತು. ನೇರಳೆ ಮಾರ್ಗದಲ್ಲಿ 4,78,334 ಜನರು ಪ್ರಯಾಣ ಮಾಡಿದರೆ, ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್ (ಹಸಿರು ಮಾರ್ಗದಲ್ಲಿ) 2,84,674 ಜನರು ಪ್ರಯಾಣಿಸಿದ್ದಾರೆ ಎಂದಿದೆ.
ಮೆಜೆಸ್ಟಿಕ್ ನಿಲ್ದಾಣದಿಂದಲೇ 2,03,724 ಜನರು ಪ್ರಯಾಣ ಮಾಡಿದ್ದಾರೆ. ಒಟ್ಟಾರೆ ನಿನ್ನೇ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಹಿಂದೆ 8.7 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ನಮ್ಮ ಮೆಟ್ರೋ ದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ಮೆಟ್ರೋ ಹಿಂದಿಕ್ಕಿದೆ. ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿತ್ತು ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.