ಢಾಕಾ: ಮುಂಬರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ತಮ್ಮ ಏಕದಿನ ತಂಡದ ನಾಯಕನನ್ನು ಬದಲಾಯಿಸಿದೆ. ನಜ್ಮುಲ್ ಹೊಸೈನ್ ಶಾಂಟೊ ಅವರ ಬದಲಿಗೆ, ಸ್ಟಾರ್ ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ ಅವರನ್ನು ನೂತನ ಏಕದಿನ ನಾಯಕರನ್ನಾಗಿ ಘೋಷಿಸಲಾಗಿದೆ.
ಶಾಂಟೊ ಇತ್ತೀಚೆಗೆ ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಗಮನಹರಿಸುವ ಸಲುವಾಗಿ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರೂ, ಏಕದಿನ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದರು. ಆದಾಗ್ಯೂ, ಮಂಡಳಿ ಮಿರಾಜ್ಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.
ಮೆಹಿದಿ ಹಸನ್ ಆಯ್ಕೆಗೆ ಬಿಸಿಬಿಯ ಸಮರ್ಥನೆ
ಬಿಸಿಬಿಯ ಕ್ರಿಕೆಟ್ ಕಾರ್ಯಾಚರಣೆ ಸಮಿತಿಯ ಅಧ್ಯಕ್ಷ ನಜ್ಮುಲ್ ಅಬೆದೀನ್ ಅವರು ಮೆಹಿದಿ ಹಸನ್ ಮಿರಾಜ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಮೆಹಿದಿ ಹಸನ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿನ ಸ್ಥಿರ ಪ್ರದರ್ಶನ, ತಂಡವನ್ನು ಪ್ರೇರೇಪಿಸುವ ಅವರ ಸಾಮರ್ಥ್ಯ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಅವರ ಉತ್ಸಾಹಭರಿತ ಉಪಸ್ಥಿತಿಯು, ತಂಡದ ಈ ಪರಿವರ್ತನೆಯ ಸಮಯದಲ್ಲಿ ಏಕದಿನ ತಂಡವನ್ನು ಮುನ್ನಡೆಸಲು ಸೂಕ್ತ ಎನಿಸಿದೆ ಎಂದು ಮಂಡಳಿ ಭಾವಿಸಿದೆ” ಎಂದು ಅವರು ಹೇಳಿದ್ದಾರೆ.
ಮಿರಾಜ್ ಬಾಂಗ್ಲಾದೇಶದ ಕ್ರಿಕೆಟ್ಗೆ ಹೊಸ ಶಕ್ತಿಯನ್ನು ತುಂಬುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ಬಿಸಿಬಿಯ ನಂಬಿಕೆ. ತಂಡವು ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿದ್ದು, ಮಿರಾಜ್ ಅವರ ನಾಯಕತ್ವದಲ್ಲಿ ಹೊಸ ದಿಕ್ಕನ್ನು ಕಂಡುಕೊಳ್ಳುವ ನಿರೀಕ್ಷೆಯಿದೆ.
ಪ್ರಭಾವಶಾಲಿ ದಾಖಲೆ
26 ವರ್ಷದ ಮೆಹಿದಿ ಹಸನ್ ಮಿರಾಜ್, ಈಗಾಗಲೇ 105 ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಪ್ರತಿನಿಧಿಸಿದ್ದಾರೆ. ಅವರು 1617 ರನ್ಗಳನ್ನು ಗಳಿಸುವುದರ ಜೊತೆಗೆ 110 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಪ್ರಭಾವಶಾಲಿ ಪ್ರದರ್ಶನದಿಂದಾಗಿ, ಮಿರಾಜ್ ಪ್ರಸ್ತುತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಆಲ್ರೌಂಡರ್ಗಳ ವಿಭಾಗದಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಪೂರ್ಣಕಾಲಿಕ ನಾಯಕರಾಗಿ ನೇಮಕಗೊಳ್ಳುವ ಮುನ್ನ, ಮೆಹಿದಿ ಹಸನ್ ಈ ಹಿಂದೆ ನಾಲ್ಕು ಏಕದಿನ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಹಂಗಾಮಿ ನಾಯಕನಾಗಿ ಮುನ್ನಡೆಸಿದ್ದರು. ಈ ಅಲ್ಪಾವಧಿಯ ನಾಯಕತ್ವದಲ್ಲಿ ಅವರು ತಮ್ಮ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದರು.
ಇದು ನನಗೆ ಸಿಕ್ಕ ದೊಡ್ಡ ಗೌರವ”: ಮೆಹಿದಿ ಹಸನ್ ಮಿರಾಜ್
ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ನಂತರ, ಮೆಹಿದಿ ಹಸನ್ ಬಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. “ಮಂಡಳಿಯಿಂದ ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ನನಗೆ ಸಿಕ್ಕ ದೊಡ್ಡ ಗೌರವ” ಎಂದು ಅವರು ತಿಳಿಸಿದ್ದಾರೆ. “ದೇಶವನ್ನು ಮುನ್ನಡೆಸುವುದು ಯಾವುದೇ ಕ್ರಿಕೆಟಿಗನ ಕನಸಾಗಿರುತ್ತದೆ ಮತ್ತು ಮಂಡಳಿ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಮೆಹಿದಿ ಹೇಳಿದರು.
ತಮ್ಮ ತಂಡದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮಿರಾಜ್, “ನನಗೆ ಈ ತಂಡದ ಮೇಲೆ ಸಂಪೂರ್ಣ ನಂಬಿಕೆ ಇದೆ. ನಮ್ಮಲ್ಲಿ ನಿರ್ಭೀತ ಕ್ರಿಕೆಟ್ ಆಡುವ ಪ್ರತಿಭೆ ಮತ್ತು ನಂಬಿಕೆ ಇದೆ. ನಾವು ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಬೇಕು, ಹಿಂಜರಿಕೆಯಿಲ್ಲದೆ ಆಡಬೇಕು ಮತ್ತು ದೇಶಕ್ಕಾಗಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಬೇಕು ಎಂದು ನಾನು ಬಯಸುತ್ತೇನೆ” ಎಂದರು.