ನವದೆಹಲಿ: ಆಪರೇಷನ್ ಸಿಂದೂರ…. ಪಹಲ್ಗಾಮ್ ದಾಳಿಯಲ್ಲಿ ನಮ್ಮ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿಹಾಕಿದ ಉಗ್ರರನ್ನು ಸಂಹಾರಗೈದ ಬೆನ್ನಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಈ ಕಾರ್ಯಾಚರಣೆಯ ಹೆಸರನ್ನು “ಆಪರೇಷನ್ ಸಿಂದೂರ”( Operation Sindoor) ಎಂದು ಘೋಷಿಸುತ್ತಿದ್ದಂತೆ ಭಾರತೀಯರ ಮೈ ಮನಸ್ಸುಗಳಲ್ಲಿ ರೋಮಾಂಚನದ ಅನುಭವವಾಗಿತ್ತು. ಅಬ್ಬಾ, ಎಂಥಾ ಹೆಸರಿದು? ಎಂದು ಎಲ್ಲರೂ ಉದ್ಗರಿಸಿದ್ದರು. ಆಂಗ್ಲ ಭಾಷೆಯ Operation Sindoor ಅಕ್ಷರಗಳ ಮಧ್ಯೆ ಸಿಂದೂರ ತುಂಬಿದ ಪುಟ್ಟ ಡಬ್ಬ, ಅದರಿಂದ ಪಕ್ಕಕ್ಕೆ ಚೆಲ್ಲಿರುವ ಕುಂಕುಮ…. ಇಂಥದ್ದೊಂದು ಅದ್ಭುತ ವಿನ್ಯಾಸವನ್ನು ಮಾಡಿದ್ದು ಯಾರಿರಬಹುದು ಎಂಬ ಪ್ರಶ್ನೆಯೂ ಎಲ್ಲರಲ್ಲಿ ಹುಟ್ಟಿತ್ತು.
ಆ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಈ ಲೋಗೋವನ್ನು ವಿನ್ಯಾಸಗೊಳಿಸಿದ್ದು ಯಾವುದೋ ಜಾಹೀರಾತು ವೃತ್ತಿಪರರೋ, ದೊಡ್ಡ ವಿನ್ಯಾಸಕಾರರೋ ಅಥವಾ ಬ್ರ್ಯಾಂಡಿಂಗ್ ಸಂಸ್ಥೆಯೋ ಅಲ್ಲ. ಬದಲಿಗೆ, ದೇಶದ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸೇನಾಧಿಕಾರಿಗಳು.
ಅವರೇ ಲೆಫ್ಟಿನೆಂಟ್ ಕರ್ನಲ್ ಹರ್ಷ ಗುಪ್ತ ಮತ್ತು ಹವಿಲ್ದಾರ್ ಸುರೀಂದರ್ ಸಿಂಗ್.

ಹೌದು, ಮೇ 7ರಂದು ಪಾಕ್ ಮತ್ತು ಪಿಒಕೆಯ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆಯು ನಿಖರ ದಾಳಿ ನಡೆಸಿದ ಕ್ಷಣಮಾತ್ರದಲ್ಲೇ ಈ ಲೋಗೋವನ್ನು ಅನಾವರಣಗೊಳಿಸಲಾಗಿತ್ತು. ಸಿಂದೂರ ಪದದಲ್ಲಿ ಬರುವ “O” ಅನ್ನು ವಿವಾಹಿತ ಹಿಂದೂ ಮಹಿಳೆಯರ ಪವಿತ್ರ ಸಂಕೇತವಾದ ಕುಂಕುಮದ ಬಟ್ಟಲಿನಂತೆ ತೋರಿಸಿ, ಅದರ ಪಕ್ಕದಲ್ಲೇ ಸಿಂದೂರ ಚೆಲ್ಲಿದಂತೆ ವಿನ್ಯಾಸಗೊಳಿಸಲಾಗಿತ್ತು. ಇದು ತ್ಯಾಗ, ನ್ಯಾಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾಗಿತ್ತು.
ದೇಶದ ಸೇನೆಯ ವ್ಯೂಹಾತ್ಮಕ ಸಂವಹನದ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯದ ಸಾಮಾಜಿಕ ಜಾಲತಾಣ ವಿಭಾಗವೇ ಈ ಹೊಸ ಐಕಾನಿಕ್ ಲೋಗೋವನ್ನು ವಿನ್ಯಾಸಗೊಳಿಸಿತ್ತು.
ಈ ಲೋಗೋವನ್ನು ಮೊದಲಿಗೆ ಟ್ಟೀಟರ್ ನಲ್ಲಿ ಪೋಸ್ಟ್ ಮಾಡಿದ್ದು ಮೇ 7ರ ತಡಾತ್ರಿ 1.51ಕ್ಕೆ. ಪಾಕ್, ಪಿಒಕೆಯ ಮೇಲೆ ನಡೆಸಿದ 25 ನಿಮಿಷಗಳ ಕಾರ್ಯಾಚರಣೆ ಪೂರ್ಣಗೊಂಡ ಕೆಲವೇ ಕ್ಷಣಗಳಲ್ಲಿ ಲೋಗೋವನ್ನು ಜಗತ್ತಿಗೆ ಅನಾವರಣಗೊಳಿಸಲಾಯಿತು. ಇದರ ಜೊತೆಗೆ, “#PahalgamTerrorAttack Justice is Served. Jai Hind!”(ಪಹಲ್ಗಾಮ್ ಉಗ್ರರ ದಾಳಿಗೆ ನ್ಯಾಯ ಒದಗಿಸಿದ್ದೇವೆ. ಜೈ ಹಿಂದ್) ಎಂಬ ಸಂಕ್ಷಿಪ್ತ ಸಂದೇಶವನ್ನೂ ಬರೆಯಲಾಗಿತ್ತು. ಈ ಪೂರ್ತಿ ಲೋಗೋದ ವಿನ್ಯಾಸದ ಕುರಿತು ಈಗ ಸೇನೆಯು ಬಾತ್ ಚೀತ್ ನಿಯತಕಾಲಿಕೆಯಲ್ಲಿ ಮಾಹಿತಿ ಬಹಿರಂಗಪಡಿಸಿದ್ದು, ಇದನ್ನು ಲೆಫ್ಟಿನೆಂಟ್ ಕರ್ನಲ್ ಹರ್ಷ ಗುಪ್ತ ಮತ್ತು ಹವಿಲ್ದಾರ್ ಸುರೀಂದರ್ ಸಿಂಗ್ ವಿನ್ಯಾಸಗೊಳಿಸಿದ್ದರು ಎಂಬುದನ್ನು ತಿಳಿಸಿದೆ.