ಧಾರವಾಡ : ಜೈನ್ ಧರ್ಮದ ಮಹಾತಪಸ್ವಿನಿ ಗಣಿನಿ ಆರ್ಯಿಕಾರತ್ನ 105 ಶ್ರೀಜಿನವಾಣಿ ಮಾತಾಜಿ ಅವರ 30ನೆಯ ಪಾವನ ವರ್ಷಾಯೋಗದ ಚಾತುರ್ಮಾಸ ವೃತಾಚರಣೆ 4 ತಿಂಗಳುಗಳ ಕಾಲ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಜುಲೈ-2 ರಿಂದ ಆರಂಭಗೊಳ್ಳಲಿದೆ.
ಮಹಾತಪಸ್ವಿ ಆಯುರ್ವೇದಾಚಾರ್ಯ ಶ್ರೀ 108 ಕುಶಾಗ್ರನಂದಿ ಗುರುದೇವರ ಪರಮ ಶಿಷ್ಯತ್ವ ಹೊಂದಿರುವ ಶ್ರೀಜಿನವಾಣಿ ಮಾತಾಜಿ ಅವರು 2007 ರಿಂದ ನಿರಂತರವಾಗಿ ಪ್ರತೀ ವರ್ಷವೂ ಚಾತುರ್ಮಾಸ ವೃತಾಚರಣೆ ಮಾಡುತ್ತ ಬಂದಿದ್ದು, ಕರ್ನಾಟಕವೂ ಸೇರಿದಂತೆ ರಾಜಸ್ಥಾನ, ಮಹಾರಾ಼ಷ್ಟ್ರ, ದೆಹಲಿ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ವಿವಿಧ ಧರ್ಮಕ್ಷೇತ್ರಗಳಲ್ಲಿ 29 ಚಾತುರ್ಮಾಸ ವೃತಾಚರಣೆಗಳನ್ನು ಕೈಕೊಂಡಿದ್ದು, ಪ್ರಸ್ತುತ 30ನೆಯ ಚಾತುರ್ಮಾಸ ಅಮ್ಮಿನಬಾವಿಯಲ್ಲಿ ಜರುಗುತ್ತಿದೆ.
ಶುಭಾಗಮನ : ಜುಲೈ-2 ರಂದು ಪ್ರಾತಃಕಾಲ 7 ಗಂಟೆಗೆ ಅಮ್ಮಿನಬಾವಿ ಗ್ರಾಮಕ್ಕೆ ಶ್ರೀಜಿನವಾಣಿ ಮಾತಾಜಿ ಅವರ ಶುಭಾಗಮನವಾಗಲಿದ್ದು, ಅವರ ಸಮಸ್ತ ಸಂಘ ಪರಿವಾರದ ಪುರಪ್ರವೇಶ ನಡೆಯಲಿದೆ. ಜು.3 ರಿಂದ 10ರವರೆಗೆ ಅಷ್ಟಾಹ್ನಿಕಾ ಪರ್ವದ ಅಂಗವಾಗಿ ಆತ್ಮ ಕುಂಕುಮ ವೃತ, ಜು.9 ರಂದು ಸಂಜೆ 7 ಗಂಟೆಗೆ ಮಂಗಲ ಕಲಶ ಸ್ಥಾಪನೆಯಾಗಲಿದೆ. 4 ತಿಂಗಳ ಅವಧಿಯಲ್ಲಿ ಗುರುಪೂರ್ಣಿಮೆ, ವೀರಶಾಸನ ಜಯಂತಿ, ಮುಕುಟ ಸಪ್ತಮಿ, ರಕ್ಷಾ ಬಂಧನ, ಶೋಡಶಕಾರಣ, ದಶಲಕ್ಷಣ ಮಹಾಪರ್ವ, ಸುಗಂಧ ದಶಮಿ, ಅನಂತ ಚತುರ್ದಶಿ, ಕ್ಷಮಾವಾಣಿ ಪರ್ವ, ಘಟಸ್ಥಾಪನಾ, ವಿಜಯದಶಮಿ, ಶರಧ ಪೂರ್ಣಿಮಾ ನಡೆಯಲಿದ್ದು, ಅಕ್ಟೋಬರ್-20ರಂದು ಮಹಾವೀರರ ನಿರ್ವಾಣೋತ್ಸವ ನಂತರ ಚಾತುರ್ಮಾಸ ಮಂಗಲಗೊಳ್ಳುವುದು.
ದಿನಚರಿ : ನಿತ್ಯವೂ ಬೆಳಗಿನ ಜಾವ 3 ಗಂಟೆಯಿಂದ ಧ್ಯಾನ, ಸ್ವಾಧ್ಯಾಯ, ಯೋಗದೊಂದಿಗೆ ಮಾತಾಜಿ ದಿನಚರಿ ಆರಂಭವಾಗುವುದು. ಸಂಜೆ 6 ಗಂಟೆಯವರೆಗೆ ಶ್ರಾವಕ-ಶ್ರಾವಕಿಯರಿಗೆ ಪೂಜೆ, ಭಜನೆ, ಆರತಿ ಮತ್ತು ತತ್ವಾರ್ಥ ಚಿಂತನೆಯ ಮಾರ್ಗದರ್ಶನ ಮಾಡುವರು. ಪ್ರತೀ ರವಿವಾರ ಮಧ್ಯಾಹ್ನ ಮಾತಾಜಿ ಅವರಿಂದ ವಿಶೇಷ ಆಶೀರ್ವಚನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಮತ್ತು ಹೊರರಾಜ್ಯಗಳ ಶ್ರಾವಕ-ಶ್ರಾವಕಿಯರು ಈ ಚಾತುರ್ಮಾಸ ಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಅಮ್ಮಿನಬಾವಿ ದಿಗಂಬರ ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ಮನವಿ ಮಾಡಿದ್ದಾರೆ.