ಮುಂಬೈ: ಮರಾಠಿ ಚಿತ್ರರಂಗ, ದೂರದರ್ಶನ ಮತ್ತು ರಂಗಭೂಮಿಯಲ್ಲಿ ತಮ್ಮ ಅಗಾಧ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ನಟ ಮತ್ತು ನಿರ್ದೇಶಕ ತುಷಾರ್ ಘಾಡಿಗಾಂವ್ಕರ್ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲಸವಿಲ್ಲದೇ ನೊಂದಿದ್ದ ಅವರು, ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟನೆ ಮರಾಠಿ ಮನರಂಜನಾ ಜಗತ್ತಿನಲ್ಲಿ ಆಘಾತ ಮತ್ತು ದುಃಖದ ಅಲೆಯನ್ನು ಉಂಟುಮಾಡಿದೆ.
ತುಷಾರ್ ಅವರು ಮುಂಬೈನ ಗೋರೇಗಾಂವ್ ಪಶ್ಚಿಮದ ರಾಮಮಂದಿರ ಪ್ರದೇಶದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಕೆಲಸದಿಂದ ಮರಳಿದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಎಷ್ಟೇ ಕರೆದರೂ ತೆರೆಯದ ಕಾರಣ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ. ತುಷಾರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪೊಲೀಸರು ಈ ಸಂಬಂಧ ಆಕಸ್ಮಿಕ ಸಾವು ವರದಿ (ADR) ದಾಖಲಿಸಿಕೊಂಡಿದ್ದಾರೆ.

ತುಷಾರ್ ಘಾಡಿಗಾಂವ್ಕರ್ರ ಜೀವನ ಮತ್ತು ಸಾಧನೆ
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕಂಕಾವಲಿಯಿಂದ ಬಂದ ತುಷಾರ್, ಮುಂಬೈನ ರೂಪಾರೆಲ್ ಕಾಲೇಜಿನಲ್ಲಿ ಓದುವಾಗ ಏಕಾಂಕ ನಾಟಕ ಸ್ಪರ್ಧೆಗಳ ಮೂಲಕ ತಮ್ಮ ನಟನೆಯ ಪಯಣವನ್ನು ಪ್ರಾರಂಭಿಸಿದರು. ಅವರ ಪ್ರತಿಭೆಯು ಮರಾಠಿ ಚಿತ್ರಗಳು, ದೂರದರ್ಶನ ಧಾರಾವಾಹಿಗಳು ಮತ್ತು ರಂಗಭೂಮಿಯಲ್ಲಿ ಅನಾವರಣಗೊಂಡಿತು. ‘ಲವಂಗಿ ಮಿರ್ಚಿ’, ‘ಮನ್ ಕಸ್ತೂರಿ ರೇ’, ‘ಬಾಹುಬಲಿ’, ‘ಉನಾದ್’, ‘ಝೊಂಬಿವ್ಲಿ’, ‘ಹೇ ಮನ್ ಬಾವರೆ’, ‘ಸಂಗೀತ ಬಿಬಾಟ್ ಆಖ್ಯಾನ್’ ಮತ್ತು ‘ಸಖಾ ಮಾಝಾ ಪಾಂಡುರಂಗ’ (ಸನ್ ಮರಾಠಿ) ಧಾರಾವಾಹಿಗಳಲ್ಲಿ ಅವರ ಪಾತ್ರಗಳು ಗಮನ ಸೆಳೆದಿವೆ. ಇದರ ಜೊತೆಗೆ, ಸಂಜಯ್ ಲೀಲಾ ಬನ್ಸಾಲಿಯವರ ಬಾಲಿವುಡ್ ಚಿತ್ರ ‘ಮಲಾಲ್’ (2019) ನಲ್ಲಿ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟನೆಯ ಜೊತೆಗೆ, ತುಷಾರ್ ‘ಘಂಟಾನಾದ್ ಪ್ರೊಡಕ್ಷನ್ಸ್’ ಎಂಬ ತಮ್ಮ ಬ್ಯಾನರ್ ಅಡಿಯಲ್ಲಿ ಸಂಗೀತ ವಿಡಿಯೋಗಳನ್ನು ನಿರ್ಮಿಸಿದ್ದರು ಮತ್ತು ‘ತುಝಿ ಮಾಝಿ ಯಾರಿ’ ಎಂಬ ಮರಾಠಿ ದೂರದರ್ಶನ ಕಾರ್ಯಕ್ರಮವನ್ನು ನಿರ್ದೇಶಿಸಿದ್ದರು. 2022ರಲ್ಲಿ ಸಿದ್ಧಿ ಎಂಬವರ ಜೊತೆಗೆ ಅವರು ವಿವಾಹವಾಗಿದ್ದರು. ಆ ಸಮಯದಲ್ಲಿ ‘ತುಮ್ಚಿ ಮುಲ್ಗಿ ಕಾಯ್ ಕರತೆ?’ ಎಂಬ ಧಾರಾವಾಹಿಯಲ್ಲಿ ಪಾತ್ರವಹಿಸುತ್ತಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ತುಷಾರ್ ಕಳೆದ ಒಂದು ವರ್ಷದಿಂದ ಕೆಲಸದ ಕೊರತೆಯಿಂದ ಖಿನ್ನತೆಗೆ ಒಳಗಾಗಿದ್ದರು. ಮದ್ಯಕ್ಕೂ ದಾಸರಾಗಿದ್ದರು. ಅವರ ಪತ್ನಿ ಮತ್ತು ತಂದೆಯ ಹೇಳಿಕೆ ದಾಖಲಿಸಿರುವ ಪೊಲೀಸರು, ತುಷಾರ್ ಇತ್ತೀಚೆಗೆ ಮೌನವಾಗಿ ಮತ್ತು ಚಿಂತಿತರಾಗಿದ್ದರೂ ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳುತ್ತಾರೆಂದು ನಾವು ಯಾರೂ ಭಾವಿಸಿರಲಿಲ್ಲ ಎಂದಿದ್ದಾರೆ.
ತುಷಾರ್ರ ಸ್ನೇಹಿತ ಮತ್ತು ‘ಚಲಾ ಹವಾ ಯೇ ಊದ್ಯಾ’ ಖ್ಯಾತಿಯ ನಟ ಅಂಕುರ್ ವಿಠ್ಠಲರಾವ್ ವಾಢವೆ, ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಸಂದೇಶವನ್ನು ಬರೆದಿದ್ದಾರೆ: “ಮಿತ್ರ, ಏಕೆ? ಯಾಕಾಗಿ ಹೀಗೆ ಮಾಡಿದೆ? ಕೆಲಸ ಬರುತ್ತದೆ, ಹೋಗುತ್ತದೆ! ನಾವು ಮಾರ್ಗ ಕಂಡುಕೊಳ್ಳಬೇಕು, ಆದರೆ ಆತ್ಮಹತ್ಯೆ ಮಾರ್ಗವಲ್ಲ! ಒಪ್ಪಿಕೊಳ್ಳುತ್ತೇನೆ, ಪರಿಸ್ಥಿತಿ ಕಷ್ಟಕರವಾಗಿದೆ, ಆದರೆ ಇದು ಪರಿಹಾರವಲ್ಲ. ತುಷಾರ್ ಘಾಡಿಗಾಂವ್ಕರ್, ನೀನು ಸೋತರೆ, ನಾವೆಲ್ಲರೂ ಸೋತಂತೆ!” ಎಂದು ಬರೆದುಕೊಂಡಿದ್ದಾರೆ. ಕಲಾವಿದರಾದ ಮುಗ್ಧಾ ಗೋಡ್ಬೋಲೆ, ಸಮೀರ್ ಪಾಟೀಲ್ ಮತ್ತು ಅಭಿಷೇಕ್ ದೇಶಮುಖ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.