ತಿರುವಣ್ಣಾಮಲೈ: ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅಣ್ಣಾಮಲೈ ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬರು ಮಾಂಸಾಹಾರ ಸೇವಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಮಾಂಸಾಹಾರ ಸೇವನೆ ಮಾಡಿದ ವ್ಯಕ್ತಿಯ ವಿರುದ್ಧ ಭಕ್ತಾದಿಗಳು ರೊಚ್ಚಿಗೆದ್ದಿದ್ದಾರೆ.
ದೇವಾಲಯದ ನಾಲ್ಕನೇ ಪ್ರಹಾರಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲೇ ಕುಳಿತು ವ್ಯಕ್ತಿಯೊಬ್ಬ ಮಾಂಸಾಹಾರವನ್ನು ಸೇವಿಸುತ್ತಿದ್ದುದನ್ನು ಕಂಡ ಭಕ್ತಾದಿಗಳು, ಕೂಡಲೇ ದೇವಾಲಯದ ಅಧಿಕಾರಿಗಳಿಗೆ ವಿಷಯ ತಲುಪಿಸಿದ್ದಾರೆ.
ಅಲ್ಲಿಗೆ ಧಾವಿಸಿದ ಅಧಿಕಾರಿಗಳು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು, ಏನು ತಿನ್ನುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ, ನಾನು ಕುಷ್ಕಾ(ಮಾಂಸವಿಲ್ಲದ ಬಿರಿಯಾನಿ ಅನ್ನ) ಆರ್ಡರ್ ಮಾಡಿದ್ದೆ. ಆದರೆ ಅದರಲ್ಲಿ ತಪ್ಪಾಗಿ ಒಂದು ತುಂಡು ಕೋಳಿ ಮಾಂಸ ಬಿದ್ದಿತ್ತು ಎಂದು ಹೇಳಿದ್ದಾನೆ.
ಕೂಡಲೇ ಆ ಆಹಾರದ ಪೊಟ್ಟಣವನ್ನು ಹಾಗೆಯೇ ಪ್ಯಾಕ್ ಮಾಡುವಂತೆ ಸೂಚಿಸಿದ ಅಧಿಕಾರಿಗಳು, ನಂತರ ಜಿಲ್ಲಾ ಪೊಲೀಸರಿಗೆ ಕರೆ ಮಾಡಿದ್ದಾರೆ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ.
ಈ ಹಿಂದೆ ಜನವರಿ ತಿಂಗಳಲ್ಲಿ, ಮಧುರೈನ ಪವಿತ್ರ ತಿರುಪಾರಂಕುಂಡ್ರಂ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಂಗ್ ನಾಯಕ ಮತ್ತು ರಾಮನಾಥಪುರಂ ಸಂಸದ ನವಾಜ್ ಕಾನಿ ಅವರು ಮಾಂಸಾಹಾರವನ್ನು ಸೇವಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಆರೋಪಿಸಿದ್ದರು. ಅದು ಕೂಡ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಸಂಸದನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಅಣ್ಣಾಮಲೈ, ಹಿಂದೂಗಳು ಶಾಂತಿ ಪ್ರಿಯರು. ಆದರೆ, ಸಂಸದ ನವಾಜ್ ಅವರು ದೇವಸ್ಥಾನವಿರುವ ಬೆಟ್ಟಕ್ಕೆ ಹೋಗಿ ಮಾಂಸಾಹಾರ ಸೇವಿಸಿದ್ದಾರೆ. ಇದು ದುರದೃಷ್ಟಕರ. ರಾಜ್ಯದಲ್ಲಿ ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಈ ಸಂಸದನನ್ನು ಮೊದಲು ವಜಾ ಮಾಡಬೇಕು. ಅವರು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದೂ ಆಗ್ರಹಿಸಿದ್ದರು.