ಆನೆಕಲ್: ಅಂಗಡಿಗೆ ಹೋಗುತ್ತಿದ್ದ ಯುವತಿಯ ಮೈ, ಕೈ ಮುಟ್ಟಿ ಹಲ್ಲೆ ಮಾಡಿದ್ದ ಪ್ರಕರಣ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಗಾಂಜಾ ಮತ್ತಿನಲ್ಲಿ ಈ ಘಟನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಆನೇಕಲ್ನ (Anekal) ರೇಣುಕಾ ಬಡವಾಣೆ ನಿವಾಸಿ ಯುವತಿ ಶಾಂತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಪ್ರಮುಖ ಆರೋಪಿ ಜಾನ್ ರಿಚರ್ಡ್ನನ್ನು (26) ವಶಕ್ಕೆ ಪಡೆದಿದ್ದಾರೆ.
ಬನ್ನೇರುಘಟ್ಟ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವಿಷಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಶಾಂತಿ ಭಾನುವಾರ ಸಂಜೆ ಅಂಗಡಿಗೆ ಹೋಗುತ್ತಿದ್ದ ವೇಳೆ ಯುವಕರು ಅಡ್ಡ ಹಾಕಿದ್ದಾರೆ. ಬಲವಂತವಾಗಿ ತಳ್ಳಾಡಿ ಬರುತ್ತೀರಾ? ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಮೂರ್ನಾಲ್ಕು ಜನ ಇದ್ದರು. ಓರ್ವ ಮಾತ್ರ ಕಿರುಕುಳ ಕೊಟ್ಟು ಹಲ್ಲೆಗೈಯಲು ಮುಂದಾಗಿದ್ದಾನೆ. ಅವನೊಂದಿಗೆ ಇದ್ದವರು ಬಿಡಿಸಿದ್ದಾರೆ. ಸದ್ಯ ಹಲ್ಲೆ ಮಾಡಲು ಮುಂದಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಮೊದಲ ಆರೋಪಿ ನಮ್ಮ ವಶದಲ್ಲಿಯೇ ಇದ್ದಾನೆ. ಜಿಮ್ ಟ್ರೈನರ್ ಸಹ ಹಲ್ಲೆ ಮಾಡಿದ್ದಾನೆ. ಜಿಮ್ ಟ್ರೈನರ್ ಮೇಲೆಯೂ ದೂರು ದಾಖಲಾಗಿದೆ ಎಂದಿದ್ದಾರೆ.
ಪ್ರಕರಣದ ಕುರಿತು ಸಂತ್ರಸ್ತೆ ಮಾತನಾಡಿ, ಅಂಗಡಿಗೆ ಹೋಗುವ ಸಂದರ್ಭದಲ್ಲಿ ಯುವಕರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಎಲ್ಲರೂ ಕುಡಿದಿದ್ದರು, ಗಾಂಜಾ ಹೊಡೆದಿದ್ದರು. ನನ್ನ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೊಡೆಯಲು ಮತ್ತು ಮುಟ್ಟಲು ಬಂದರು. ಆಗ ಸ್ಥಳೀಯರು ನನ್ನನ್ನು ರಕ್ಷಿಸಿದರು ಎಂದಿದ್ದಾರೆ.