ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿ ಕೇಂದ್ರ ಸರ್ಕಾರವು 2019ರಲ್ಲಿ ಆದೇಶ ಹೊರಡಿಸಿದ್ದಾಗ ಕಾಂಗ್ರೆಸ್ ನಾಯಕರು ಸೇರಿ ಹಲವು ಪ್ರತಿಪಕ್ಷಗಳು ವಿರೋಧಿಸಿದ್ದರು. ಆದರೀಗ, ಕಳೆದ ಆರು ವರ್ಷಗಳಲ್ಲಿ ಕಾಶ್ಮೀರದಲ್ಲಿ ಭಾರಿ ಬದಲಾವಣೆ ಉಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರೇ ಮೋದಿ ಸರ್ಕಾರದ ನಿರ್ಧಾರವನ್ನು ಹೊಗಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರು 370ನೇ ವಿಧಿ ರದ್ದತಿಯ ತೀರ್ಮಾನವನ್ನು ಹಾಡಿ ಹೊಗಳಿದ್ದಾರೆ.
ಇಂಡೋನೇಷ್ಯಾಗೆ ತೆರಳಿರುವ ಭಾರತದ ನಿಯೋಗದಲ್ಲಿರುವ ಸಲ್ಮಾನ್ ಖುರ್ಷಿದ್ ಅವರು, “370ನೇ ವಿಧಿ ರದ್ದತಿಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಹಲವು ಗಂಭೀರ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದೆ” ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕರೂ ಆಗಿರುವ ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಕೂಡ 370ನೇ ವಿಧಿ ರದ್ದತಿಯ ತೀರ್ಮಾನವನ್ನು ಶ್ಲಾಘಿಸಿದ್ದರು.
“ಜಮ್ಮು-ಕಾಶ್ಮೀರವು ದೀರ್ಘ ಕಾಲದಿಂದ ಹಲವು ಸಮಸ್ಯೆಗಳಿಂದ ನಲುಗುತ್ತಿತ್ತು. ಇಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ ಸೇರಿ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದವು.. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿದ ನಂತರ ಅಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ. ಅಲ್ಲದೇ ಪ್ರವಾಸೋದ್ಯಮಕ್ಕೂ ಭಾರೀ ಉತ್ತೇಜನ ಸಿಕ್ಕಿದೆ” ಎಂದು ಸಲ್ಮಾನ್ ಖುರ್ಷಿದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ಜಮ್ಮು-ಕಾಶ್ಮೀರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.65ರಷ್ಟು ಮತದಾನ ನಡೆದಿದೆ. ಹಲವು ಉದ್ಯಮಗಳು ತಲೆಯೆತ್ತುತ್ತಿವೆ. ಕಣಿವೆಯು ಸಮೃದ್ಧಿ ಹೊಂದುತ್ತಿದೆ. ಹಲವು ಸಮಸ್ಯೆಗಳಿಂದ ಭೂಲೋಕದ ಸ್ವರ್ಗವೀಗ ಮುಕ್ತಿ ಹೊಂದಿದೆ” ಎಂದು ಹೇಳಿದ್ದಾರೆ.