ಮೈಸೂರು: ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಈ ವಿಷಯವಾಗಿ ಮೈಸೂರಿನಲ್ಲಿ ಸಚಿವ ಮಹದೇವಪ್ಪ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಸಿಎಂ ಸಿದ್ದರಾಮಯ್ಯ ಅವರೇ ದಸರಾ ಮಾಡುತ್ತಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಂಗ್ರೆಸ್ ಬಗ್ಗೆ ಆಗಲಿ, ಸಿಎಂ ಬಗ್ಗೆ ಆಗಲಿ ಬಿಜೆಪಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ.
ಸೆಪ್ಟೆಂಬರ್ ನಲ್ಲಿ ರಾಜಕೀಯ ಕ್ರಾಂತಿ ಆಗತ್ತೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವ ಕ್ರಾಂತಿ ಸಂಕ್ರಾತಿ ಯವುದೂ ಇಲ್ಲ. ಎಲ್ಲರೂ ಹಬ್ಬಗಳನ್ನು ಚೆನ್ನಾಗಿಯೇ ಆಚರಣೆ ಮಾಡುತ್ತಾರೆ. ಇರೋದು ಒಂದೇ ಸಿಎಂ ಖುರ್ಚಿ. ಒಬ್ಬರೇ ಸಿಎಂ ಆಗೋಕೆ ಸಾಧ್ಯ. ಹೈ ಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ.
ಸಿಎಂ ಬದಲಾಗುತ್ತಾರೆ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ. ನನಗೆ ಗೊತ್ತಿಲ್ಲ. ನಾನು ಹೈ ಕಮಾಂಡ್ ಸಭೆಯಲ್ಲಿ ಇರಲಿಲ್ಲ. ಒಂದು ವೇಳೆ ಒಪ್ಪಂದ ಆಗಿದ್ದರೆ ಅದು ನನಗೆ ಗೊತ್ತಿಲ್ಲ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ.