ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ 45 ದಿನಗಳವರೆಗೆ ನಡೆದ ಮಹಾ ಕುಂಭಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದೇಳದ ರಾಜ್ಯದ ಜನರ ಮನೆಗಳಿಗೆ ತ್ರಿವೇಣಿ ಸಂಗಮದ ಜಲ ಪೂರೈಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಯಾಗರಾಜ್ ನ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಯು ರಾಜ್ಯದ 75 ಜಿಲ್ಲೆಗಳ ಮನೆಗಳಿಗೆ ಪವಿತ್ರ ಜಲ ಪೂರೈಸಲಿದ್ದಾರೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಪವಿತ್ರ ಧಾರ್ಮಿಕ ಕಾರ್ಯಕ್ರಮವಾಗಿದೆ. ಆದರೆ, ಉತ್ತರ ಪ್ರದೇಶದ ಜನ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರವು ಜನರ ಮನೆಬಾಗಿಲಿಗೇ ಪವಿತ್ರ ಜಲವನ್ನು ಪೂರೈಸಲು ತೀರ್ಮಾನಿಸಿದೆ. ಕುಂಭಮೇಳದಲ್ಲಿ ಸುಮಾರು 66 ಕೋಟಿ ಜನ ಮಿಂದೆದ್ದಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಪೊಲೀಸರಿಗೆ 10 ಸಾವಿರ ರೂ. ಬೋನಸ್
ಮಹಾ ಕುಂಭಮೇಳದ ವೇಳೆ ಸುಮಾರು 45 ದಿನಗಳವರೆಗೆ ಭದ್ರತೆ ಸೇರಿ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ ಸುಮಾರು 75 ಸಾವಿರ ಪೊಲೀಸರಿಗೆ, ಸ್ವಚ್ಛತಾ ಸಿಬ್ಬಂದಿಗೆ ಉತ್ತರ ಪ್ರದೇಶ ಸರ್ಕಾರವು 10 ಸಾವಿರ ರೂಪಾಯಿ ಬೋನಸ್ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, ಪೊಲೀಸರು 7 ದಿನಗಳವರೆಗೆ ರಜೆ ತೆಗೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಣೆ ಮಾಡಿದ್ದಾರೆ.
“ಮಹಾ ಕುಂಭಮೇಳವು ಸುಗಮವಾಗಿ ಸಾಗಲು ಪೊಲೀಸ್ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಅವರ ಕೊಡುಗೆಯನ್ನು ಪರಿಗಣಿಸಿ ಬೋನಸ್ ಹಾಗೂ ರಜೆ ಘೋಷಣೆ ಮಾಡಲಾಗಿದೆ. ಅವರ ಶ್ರಮದಿಂದಾಗಿ ಮಹಾ ಕುಂಭಮೇಳವು ಇತಿಹಾಸ ಸೃಷ್ಟಿಸಿದೆ. ಕುಂಭಮೇಳದಿಂದ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಆದಾಯ ಸೃಷ್ಟಿಯಾಗಿದೆ” ಎಂದು ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ.