ಜೊಹಾನ್ಸ್ ಬರ್ಗ್:
ದಕ್ಷಿಣ ಧ್ರುವ ಪ್ರದೇಶದಲ್ಲಿನ ಅತಿದೊಡ್ಡ ಹಿಂದೂ ದೇವಾಲಯದ ಉದ್ಘಾಟನೆ ದಕ್ಷಿಣ ಆಫ್ರಿಕಾದ(South Africa) ಜೊಹಾನ್ಸ್ ಬರ್ಗ್ ನಲ್ಲಿ (Johannesburg) ಭಾನುವಾರ ನೆರವೇರಿದೆ.
ಬೋಚಸನ್ವಾಸಿ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥೆ(ಬಿಎಪಿಎಸ್)ಯ ಆಧ್ಯಾತ್ಮಿಕ ಗುರು, ಮಹಂತ ಸ್ವಾಮಿ ಮಹರಾಜ್(92) ಅವರ ನೇತೃತ್ವದಲ್ಲಿ ದೇವಸ್ಥಾನದ ಪ್ರಾಣ ಪ್ರತಿಷ್ಠಾ ಕ್ರಮಗಳು ನಡೆದವು. ಇದನ್ನು ನೆರವೇರಿಸಲೆಂದೇ ಸ್ವಾಮೀಜಿ ಭಾರತದಿಂದ ಜೊಹಾನ್ಸ್ ಬರ್ಗ್ ಗೆ ಆಗಮಿಸಿದ್ದರು.

ದಕ್ಷಿಣ ಆಫ್ರಿಕನ್ನರ ಪೈಕಿ ಶೇ.2ಕ್ಕಿಂತಲೂ ಕಡಿಮೆ ಜನರು ಹಿಂದೂ ಧರ್ಮೀಯರಾಗಿದ್ದಾರೆ. ಆದರೆ ಆ ದೇಶದಲ್ಲಿರುವ ಭಾರತೀಯ ಸಮುದಾಯದವರಲ್ಲಿ ಬಹುತೇಕ ಮಂದಿ ಹಿಂದೂ ಧರ್ಮದ ಅನುಯಾಯಿಗಳಾಗಿದ್ದಾರೆ. ಹೀಗಾಗಿ ದೇಗುಲ ಮತ್ತು ಸಾಂಸ್ಕೃತಿಕ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲೆಂದು ಭಾರೀ ಸಂಖ್ಯೆಯ ಭಕ್ತಾದಿಗಳು ಮುಂಜಾನೆಯೇ ದೇಗುಲಕ್ಕೆ ಆಗಮಿಸಿದ್ದರು.
ಬಿಎಪಿಎಸ್ ಸಂಸ್ಥೆಯು, ಈ ದೇವಾಲಯವನ್ನು ದಕ್ಷಿಣ ಧ್ರುವದಲ್ಲಿರುವ ಅತಿದೊಡ್ಡ ಹಿಂದೂ ದೇಗುಲ ಮತ್ತು ಸಾಂಸ್ಕೃತಿಕ ಸಂಕೀರ್ಣ ಎಂದು ಬಣ್ಣಿಸಿದೆ. ಅಲ್ಲದೆ ಇದು ಅಂತರ್ ಸಾಂಸ್ಕೃತಿಕ ಮತ್ತು ಅಂತರ್ ಧರ್ಮೀಯ ಚರ್ಚೆ ಹಾಗೂ ವಿನಿಮಯದ ಕೇಂದ್ರವಾಗಬೇಕೆಂದು ನಮ್ಮ ಸಂಸ್ಥೆ ಬಯಸುತ್ತದೆ ಎಂದು ಬಿಎಪಿಎಸ್ ವಕ್ತಾರ ಹೇಮಂಗ್ ದೇಸಾಯಿ ಹೇಳಿದ್ದಾರೆ.

ದೇಗುಲ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಹಲವಾರು ಸಾಧು ಸಂತರು ಮೆರವಣಿಗೆಯ ಮೂಲಕ ಜೊಹಾನ್ಸ್ ಬರ್ಗ್ ನಲ್ಲಿ ನಗರ್ ಯಾತ್ರೆ ಕೈಗೊಂಡರು.