ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ವರ್ಷಕ್ಕೆ 6 ಸಾವಿರ ರೂ. ಸಹಾಯಧನ, ಬೆಳೆ ವಿಮೆ ಸೇರಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇಂತಹ ಯೋಜನೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಅಥವಾ ಕೆಸಿಸಿ ಯೋಜನೆಯೂ ಒಂದಾಗಿದ್ದು, ಅನ್ನದಾತರಿಗೆ ಕಡಿಮೆ ಬಡ್ಡಿದರದಲ್ಲಿ 3-5 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ. ಈ ಸಾಲವನ್ನು ಪಡೆದು ರೈತರು ಕೃಷಿ ಚಟುವಟಿಕೆಗಳಲ್ಲಿ ಏಳಿಗೆ ಹೊಂದಬಹುದಾಗಿದೆ. ಹಾಗಾದ್ರೆ, ಸಾಲ ಪಡೆಯೋದು ಹೇಗೆ? ಬಡ್ಡಿ ಎಷ್ಟು ಎಂಬಿತ್ಯಾದಿ ಮಾಹಿತಿ ಈ ಸ್ಟೋರಿಯಲ್ಲಿದೆ.
ಏನಿದು ಕಿಸಾನ್ ಕ್ರೆಡಿಟ್ ಯೋಜನೆ?
ರೈತರಿಗೆ ಒಟ್ಟು ಸಿಗುವ ಸಾಲವೆಷ್ಟು?
ಸಾಲದ ಮೇಲೆ ವಿಧಿಸುವ ಬಡ್ಡಿ ಎಷ್ಟು?
ರೈತರಿಗೆ ಅಲ್ಪಾವಧಿವರೆಗೆ ನೀಡುವ ಸಾಲ ಸೌಲಭ್ಯವೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಾಗಿದೆ. ರೈತರ ಜಮೀನು, ಬೆಳೆಗಳ ಆಧಾರದ ಮೇಲೆ 3ರಿಂದ 5 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ. ಮೊದಲು 3 ಲಕ್ಷ ರೂಪಾಯಿ ಸಾಲ ನೀಡಲಾಗುತ್ತಿತ್ತು. ಕಳೆದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಇದನ್ನು 5 ಲಕ್ಷ ರೂಪಾಯಿವರೆಗೆ ವಿಸ್ತರಣೆ ಮಾಡಿದೆ. 3 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇ.7ರಷ್ಟು ಬಡ್ಡಿದರ ಇರುತ್ತದೆ. ಸಕಾಲಕ್ಕೆ ಸಾಲ ತೀರಿಸಿದರೆ, ಶೇ.3ರಷ್ಟು ಬಡ್ಡಿದರಕ್ಕೆ ವಿನಾಯಿತಿ ಇರುತ್ತದೆ. ಅಂದ್ರೆ, ರೈತರು ಶೇ.4ರಷ್ಟು ಬಡ್ಡಿ ಪಾವತಿಸಿದರೂ ಸಾಕು.
ಕೆಸಿಸಿ ಸಾಲ ಪಡೆಯೋದು ಹೇಗೆ?
ಯಾವುದಕ್ಕೆಲ್ಲ ಸಾಲ ಬಳಸಬಹುದು?
ಸಾಲ ಮರುಪಾವತಿಗೆ 1 ವರ್ಷದ ಗಡುವು
ಕರ್ನಾಟಕ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಕೃಷಿ ಸಾಲವನ್ನು ನೀಡುತ್ತವೆ. ರೈತರು ಬ್ಯಾಂಕುಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಒದಗಿಸಿ ಸಾಲವನ್ನು ಪಡೆಯಬಹುದಾಗಿದೆ. ಇನ್ನು, ಬ್ಯಾಂಕುಗಳ ವೆಬ್ ಸೈಟ್ ಗೆ ಭೇಟಿ ನೀಡಿಯೂ ಆನ್ ಲೈನ್ ಮೂಲಕವೇ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಸಲಕರಣೆ, ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳನ್ನು ಖರೀದಿಸಲು ರೈತರು ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಸಾಲ ಹಾಗೂ ಬಡ್ಡಿ ಪಾವತಿಸಲು ಒಂದು ವರ್ಷ ಕಾಲಾವಕಾಶ ಇರುತ್ತದೆ. ಅಷ್ಟರೊಳಗೆ ಪಾವತಿಸಿದರೆ ಶೇ.3ರಷ್ಟು ಬಡ್ಡಿ ವಿನಾಯಿತಿ ಸಿಗುತ್ತದೆ.
ಕೆಸಿಸಿ ಸಾಲ ಪಡೆಯಲು ಏನೆಲ್ಲ ಅರ್ಹತೆ ಬೇಕು?
ಯಾವ ದಾಖಲೆಗಳನ್ನು ರೈತರು ಸಲ್ಲಿಸಬೇಕು?
ಸಾಲಕ್ಕೆ ಇರುತ್ತದೆ ವಿಮಾ ಸುರಕ್ಷತೆ
ಸ್ವಂತ ಜಮೀನು ಹೊಂದಿರುವ, 18-75 ವರ್ಷದೊಳಗಿನ ರೈತರು ಕೃಷಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದಾಗ್ಯೂ, ಜಮೀನಿನ ದಾಖಲೆ, ಪಾಸ್ ಪೋರ್ಟ್ ಸೈಜಿನ ಫೋಟೊ, ವಿಳಾಸ, ಬೆಳೆಗಳ ಮಾದರಿ ಸೇರಿ ಹಲವು ದಾಖಲೆಗಳನ್ನು ರೈತರು ಬ್ಯಾಂಕುಗಳಿಗೆ ನೀಡಬೇಕಾಗುತ್ತದೆ. 1.6 ಲಕ್ಷ ರೂ.ಗಿಂತ ಹೆಚ್ಚಿನ ಸಾಲ ಪಡೆದರೆ, ಭದ್ರತಾ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇನ್ನು, ಸಾಲಕ್ಕೆ ವಿಮಾ ಸುರಕ್ಷತೆಯೂ ಇರಲಿದೆ. ಸಾಲ ಮಾಡಿದವರು ಅಪಘಾತದಲ್ಲಿ ತೀರಿಕೊಂಡರೆ, 50 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತದೆ.
7 ಕೋಟಿಗೂ ಅಧಿಕ ರೈತರಿಗೆ ಸಾಲ ವಿತರಣೆ
10 ಲಕ್ಷ ಕೋಟಿ ರೂ. ಸಾಲ ಒದಗಿಸಿದ ಮೋದಿ
ಕೂಡಲೇ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಿರಿ
ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕ ಇದುವರೆಗೆ 7.72 ಕೋಟಿ ರೈತರಿಗೆ ಸಾಲವನ್ನು ನೀಡಲಾಗಿದೆ. ಅದರಲ್ಲೂ, ಕಳೆದ 11 ವರ್ಷದಲ್ಲಿಯೇ 5.74 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಕೆಸಿಸಿ ಯೋಜನೆ ಅಡಿಯಲ್ಲಿ 2024ರ ಮಾರ್ಚ್ ವೇಳೆಗೆ 4.26 ಲಕ್ಷ ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿತ್ತು.
ಕೊಳವೆಬಾವಿ ಕೊರೆಸುವುದು, ಪಂಪ್ ಸೆಟ್, ವಿದ್ಯುತ್ ಸಂಪರ್ಕ ಸೇರಿ ಹಲವು ರೀತಿಯಲ್ಲೂ ಹಣವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ರೈತರು ಕೃಷಿ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಅನುಕೂಲವಾಗಲಿದೆ. ಹಾಗಾಗಿ, ಅವಶ್ಯಕತೆ ಇರುವ ರೈತರು ಕೂಡಲೇ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.