ನವದೆಹಲಿ: ಬಾಹ್ಯಾಕಾಶಕ್ಕೆ ಎರಡನೇ ಗಗನಯಾತ್ರಿಯನ್ನು ಕಳುಹಿಸುವ ಭಾರತದ ಕನಸು ನನಸಾಗುವ ಸಮಯ ಮತ್ತಷ್ಟು ವಿಳಂಬವಾಗಿದೆ. ಸ್ಪೇಸ್ ಎಕ್ಸ್ನ ಫಾಲ್ಕನ್-9 ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಕಾರಣ, ಭಾರತದ ಶುಭಾಂಶು ಶುಕ್ಲಾ ಸೇರಿ 4 ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಯೋಜನೆ ಮತ್ತೆ ಮುಂದೂಡಲ್ಪಟ್ಟಿದೆ.
ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರೆ ಮೂವರು ಗಗನಯಾನಿಗಳನ್ನು ಹೊತ್ತ ಫಾಲ್ಕನ್ -9 ರಾಕೆಟ್ ಇಂದು ಸಂಜೆ ಭಾರತೀಯ ಕಾಲಮಾನ 5.30ರ ಸುಮಾರಿಗೆ ಫ್ಲೋರಿಡಾದಿಂದ ಉಡಾವಣೆ ಆಗಬೇಕಿತ್ತು. ಆದರೆ, ರಾಕೆಟ್ ನಲ್ಲಿ ದ್ರವೀಕೃತ ಆಮ್ಲಜನಕದ ಸೋರಿಕೆ ಕಂಡುಬಂದ ಕಾರಣ ಉಡಾವಣೆ ವಿಳಂಬವಾಗಿದೆ. ಸ್ಪೇಸ್ ಎಕ್ಸ್ ಕಂಪನಿಯು 24 ಗಂಟೆಗಳ ಒಳಗಾಗಿ ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿದ್ದು, ಆ ನಿಟ್ಟಿನಲ್ಲಿ ದುರಸ್ತಿ ಪ್ರಕ್ರಿಯೆ ಆರಂಭಿಸಿದೆ. ಸದ್ಯಕ್ಕಂತೂ ಶುಭಾಂಶು ಪ್ರಯಾಣಕ್ಕೆ ಹೊಸ ದಿನಾಂಕ ನಿಗದಿಯಾಗಿಲ್ಲ.
ರಾಕೆಟ್ ನಲ್ಲಿ ಯಾವುದೇ ಸಮಸ್ಯೆಯಿಲ್ಲ ಎನ್ನುವ ಬಗ್ಗೆ ನಮಗೆ ತೃಪ್ತಿಯಾಗುವವರೆಗೂ ರಾಕೆಟ್ ಉಡಾವಣೆ ಮುಂದೂಡಿ ಎಂದು ಇಸ್ರೋ ಹೇಳಿದೆ ಎಂದೂ ಮೂಲಗಳು ತಿಳಿಸಿವೆ.
ಲಿಕ್ವಿಡ್ ಎಂಜಿನ್ನಲ್ಲಿ ಪರಿಣತರಾಗಿರುವ ಇಸ್ರೋ ಮುಖ್ಯಸ್ಥ ಡಾ.ವಿ.ನಾರಾಯಣನ್ ಅವರೂ, “ಆಕ್ಸಿಯೋಮ್ ಮತ್ತು ಸ್ಪೇಸ್ ಎಕ್ಸ್ ತಜ್ಞರೊಂದಿಗೆ ಇಸ್ರೋ ಚರ್ಚೆ ನಡೆಸಿದೆ.
ಮೊದಲಿಗೆ ಸೋರಿಕೆ ಸಮಸ್ಯೆಯನ್ನು ಪರಿಹರಿಸಿದ ಬಳಿಕ, ಅದರ ದೃಢೀಕರಣ ಪರೀಕ್ಷೆಯನ್ನು ನಡೆಸಿಯೇ ಉಡಾವಣೆಗೆ ಒಪ್ಪಿಗೆ ನೀಡಲು ನಿರ್ಧರಿಸಲಾಗಿದೆ. ಇದು ಗಗನಯಾನಿಗಳ ಸುರಕ್ಷತೆಗೆ ಸಂಬಂಧಿಸಿದ ವಿಚಾರ. ಹೀಗಾಗಿ ಉಡಾವಣೆ ಮುಂದೂಡಿಕೆ ಮಾಡಿರುವುದು ಉತ್ತಮ ನಿರ್ಧಾರ” ಎಂದು ಹೇಳಿದ್ದಾರೆ.
ಇಸ್ರೋ ಮುಖ್ಯಸ್ಥ ಡಾ.ನಾರಾಯಣನ್ ಅವರು ಪ್ರಸ್ತುತ ಫ್ಲೋರಿಡಾದಲ್ಲಿ ಕೆನೆಡಿ ಬಾಹ್ಯಾಕಾಶ ಕೇಂದ್ರದಲ್ಲಿದ್ದುಕೊಂಡು, ಫಾಲ್ಕನ್-9 ಉಡಾವಣೆಯ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆಕ್ಸಿಯೋಮ್-4 ಯೋಜನೆಯ ಮೇಲ್ವಿಚಾರಣೆಗೆಂದೇ ಭಾರತವು ತಜ್ಞರ ಎರಡು ತಂಡವನ್ನು ಕಳುಹಿಸಿದೆ.