ವಿಜಯನಗರ: ಭಾರತ ಯಾವಾಗ ಯುದ್ಧ ಘೋಷಣೆ ಮಾಡುತ್ತೆ ಎಂಬ ಭಯದಲ್ಲಿಯೇ ಪಾಕ್ ಕಾಲ ಕಳೆಯುತ್ತಿದೆ. ಈ ಮಧ್ಯೆ ಸಚಿವ ಜಮೀರ್ ಅಹ್ಮದ್ ಖಾನ್ ಯುದ್ಧ ಘೋಷಣೆಯಾಗಲಿ ಎಂದಿದ್ದಾರೆ. ಅಲ್ಲದೇ, ಮೋದಿ, ಅಮಿತ್ ಶಾ, ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಲಿ, ನಾನು ಯುದ್ಧಕ್ಕೆ ಹೋಗಲು ಸಿದ್ಧ ಎಂದು ಎದೆ ತಟ್ಟಿ, ತಟ್ಟಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ಎಂದಿಗೂ ನಮಗೆ ಸಂಬಂಧವಿಲ್ಲ. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ. ಮೋದಿ, ಅಮಿತ್ ಷಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ಕೊಡಲಿ. ನಾನು ಯುದ್ಧ ಮಾಡುವುದಕ್ಕೆ ಸಿದ್ಧ. ಯುದ್ಧ ಘೋಷಣೆಯಾದರೆ ನಾನು ಎದೆಗೊಟ್ಟು ನಿಲ್ಲುತ್ತೇನೆ ಎಂದು ಎದೆ ತಟ್ಟಿ, ತಟ್ಟಿ ಹೇಳಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಮತ್ತು ಯತ್ನಾಳ್ ರಾಜೀನಾಮೆ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ್ ಅವರು, ಯಾವಾಗಲೂ ದಮ್ಮು, ತಾಕತ್ತು ಅಂತ ಮಾತಾಡ್ತಾರೆ. ಪದೇ, ಪದೇ, ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ. ಸಚಿವ ಶಿವಾನಂದ ಪಾಟೀಲ್, ದಮ್ಮು ತಾಕತ್ತು ತೋರಿಸಿದ್ದಾರೆ. ಅವರಪ್ಪಗೆ ಹುಟ್ಟಿದವರಾದರೆ, ರಾಜೀನಾಮೆ ಕೊಟ್ಟು ಬರಲಿ ಅಂತ ಯತ್ನಾಳ್ ಹೇಳಿದ್ದಾರೆ. ಶಿವಾನಂದ್ ಪಾಟೀಲ್ ರಾಜಿನಾಮೆ ಕೊಟ್ಟು ಅವರಪ್ಪಂಗೆ ಹುಟ್ಟಿದ್ದಾರೆ ಅಂತ ತೋರಿಸಿದ್ದಾರೆ. ಹೀಗಾಗಿ ಈಗ ಯತ್ನಾಳ್ ರಾಜೀನಾಮೆ ನೀಡಿ, ಅವರಪ್ಪಂಗೆ ಹುಟ್ಟಿದ್ದಾರೆ ಅಂತ ತೋರಿಸಲಿ ಎಂದು ಜಮೀರ್ ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕೊಲೆಯಾಗಿದೆ, ಕೊಲೆಯಾಗಬಾರದಾಗಿತ್ತು. ಸತ್ತಿರುವವನು ಉತ್ತಮ ಚಾರಿತ್ರ್ಯ ವ್ಯಕ್ಯಿ, ರೌಡಿ ಶೀಟರ್ ಅಂತೆ. ಹಿಂದೆ ಕೊಲೆ ಕೇಸ್ ನಲ್ಲಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.