ಸಲೂನ್ ಗೆ ನುಗ್ಗಿ ಲೇಡಿ ರೌಡಿ ಹಾಗೂ ಗ್ಯಾಂಗ್ ಅಟ್ಟಹಾಸ ಮೆರೆದು ನಂತರ ಕಿಡ್ನ್ಯಾಪ್ ಮಾಡಿ ಸಿಬ್ಬಂದಿಗೆ ಚಿತ್ರ ಹಿಂಸೆ ನೀಡಿರುವ ಘಟನೆ ನಡೆದಿದೆ.
ಲೇಡಿ ರೌಡಿ ಕಾವ್ಯ ಎಂಬುವವರು ಸಿಗರೇಟ್ ಸೇದುತ್ತಾ, ಕಾಲಿಂದ ಒದ್ದು ರೌಡಿಸಂ ಮಾಡಿದ್ದಾಳೆ ಎನ್ನಲಾಗಿದೆ. ತಲೆ, ಬೆನ್ನು, ಮುಖಕ್ಕೆ ಹಿಗ್ಗಾಮುಗ್ಗ ಥಳಿಸಿ, ನಂತರ ಗ್ಯಾಂಗ್, ಕಿಡ್ನಾಪ್ ಮಾಡಿ ಚಿತ್ರ ಹಿಂಸೆ ನೀಡಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ಮೊದಲು ಕೆಲಸ ಮಾಡುತ್ತಿದ್ದ ಸ್ಪಾನಲ್ಲಿ ಕೆಲಸ ಬಿಟ್ಟು, ಹೊಸ ಸಲೂನ್ ಮಾಡಿದ್ದಕ್ಕೆ ಕೋಪಗೊಂಡು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ, ಮಹ್ಮದ್ ಮತ್ತು ಇಬ್ಬರು ಅಪರಿಚಿತರ ಮೇಲೆ ಅಮೃತಹಳ್ಳಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಸಂಜು ದೂರು ದಾಖಲಿಸಿದ್ದಾರೆ. ದಾಸರಹಳ್ಳಿ ಮುಖ್ಯ ರಸ್ತೆ ಮೂಲಕ ಜಕ್ಕೂರು ಕಡೆ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಚ್ಚು, ಡ್ರ್ಯಾಗನ್, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಿಸಿಟಿವಿ ಆಧರಿಸಿ ಸಂಜು ಪತ್ನಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಗ್ಯಾಂಗ್, ಪೊಲೀಸ್ ಠಾಣೆಯ ಬಳಿ ಸಂಜುನನ್ನು ಬಿಟ್ಟು ಹೋಗಿದೆ. ಆನಂತರ ಸಂಜು ಕೆಲಸ ಮಾಡುತ್ತಿದ್ದ ಸಿಸಿಟಿವಿ ಕೇಬಲ್ ಗಳನ್ನು ಗ್ಯಾಂಗ್ ಕಿತ್ತೆಸೆದಿದೆ. ಈ ಕುರಿತು ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.