ಚನ್ನಪಟ್ಟಣ: ಕೆಎಂಎಫ್ ಗೆ ಬಲಿಷ್ಠ ಅಧ್ಯಕ್ಷ ಬೇಕು. ಈ ಬಾರಿ ಕೆಎಂಎಫ್ ಅಧ್ಯಕ್ಷ ಸ್ಥಾನ ನಮ್ಮ ಜಿಲ್ಲೆಗೆ ಸಿಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಗೆ ಡಿ.ಕೆ. ಸುರೇಶ್ ಅಧ್ಯಕ್ಷರಾದರೆ ತಪ್ಪೇನಿಲ್ಲ. ಅವರು ಸಾರ್ವಜನಿಕ ಸೇವೆ ಮಾಡುವ ಆಸಕ್ತಿ ಹೊಂದಿದ್ದಾರೆ. ಕೆಎಂಎಫ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಿದೆ. ರಾಜ್ಯದಲ್ಲೇ ಚನ್ನಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತೆ. ಉತ್ತರ ಕರ್ನಾಟಕ ಭಾಗದ ಯಾರೋ ಕೆಎಂಎಫ್ಗೆ ಅಧ್ಯಕ್ಷರಾದರೆ ನಮ್ಮ ಸ್ಥಳೀಯ ಸಮಸ್ಯೆ ಅವರಿಗೆ ಗೊತ್ತಾಗಲ್ಲ. ಹಾಗಾಗಿ ಹಳೇ ಮೈಸೂರು ಭಾಗದ ಪ್ರಬಲ ನಾಯಕ ಅಧ್ಯಕ್ಷ ಆಗಬೇಕು. ಚನ್ನಪಟ್ಟಣದಲ್ಲೇ ಸಹಕಾರ ಕ್ಷೇತ್ರದಲ್ಲಿ ಈ ಹಿಂದೆ ಸಾಕಷ್ಟು ಅಕ್ರಮ, ಅವ್ಯವಹಾರ ನಡೆದಿದೆ.
ಈಗ ನೂತನ ನಿರ್ದೇಶಕರಾಗಿ ಲಿಂಗೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಅವರು ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಆರೋಪ ನಿರಾಧಾರವಾಗಿದೆ. ಸೋತವರು ಪಾಪ ಅವರ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಏನೇ ಆರೋಪ ಮಾಡಿದರು ಚುನಾವಣೆಯಲ್ಲಿ ಬಂದ ಮತಗಳಿಂದ ಕಾಂಗ್ರೆಸ್ ಗೆದ್ದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜೆಡಿಎಸ್ ನವರ ಆರೋಪಕ್ಕೆ ಯಾವುದೇ ಮನ್ನಣೆ ಇಲ್ಲ ಎಂದು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಮರುನಾಮಕರಣ ವಿಚಾರವಾಗಿ ಮಾತನಾಡಿ, ಜಿಲ್ಲೆಯ ಹೆಸರು ಬದಲಾವಣೆಯನ್ನ ಸ್ವಾಗತ ಮಾಡುತ್ತೇವೆ. ನಾವು ಮೊದಲಿನಿಂದಲೂ ಬೆಂಗಳೂರು ಜಿಲ್ಲೆಯವರು. ಕುಮಾರಸ್ವಾಮಿ ಸಿಎಂ ಆದ ಮೇಲೆ ರಾಮನಗರ ಜಿಲ್ಲೆ ಮಾಡಿದರು. ಈಗ ಡಿಸಿಎಂ ಅವರು ಇದರ ಹೆಸರು ಬದಲಾವಣೆ ಮಾಡಿದ್ದಾರೆ. ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಬಿಜೆಪಿಯವರು ಯಾಕೆ ವಿರೋಧ ಮಾಡುತ್ತಿದ್ದಾರೆ. ನಾವೇನು ರಾಮನ ಹೆಸರನ್ನ ತೆಗೆದು ಹಾಕುತ್ತಿಲ್ಲ ಎಂದಿದ್ದಾರೆ.
ಬಿಜೆಪಿಯಿಂದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಚ್ಛಾಟನೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆಂದು ಉಚ್ಛಾಟನೆ ಮಾಡಿದ್ದಾರೆ. ಅದು ಬಿಜೆಪಿ ಪಕ್ಷದ ಆಂತರಿಕ ವಿಚಾರ ಅದರ ಬಗ್ಗೆ ನಾವು ಕಮೆಂಟ್ ಮಾಡುವುದಿಲ್ಲ ಎಂದಿದ್ದಾರೆ.