ಹುಬ್ಬಳ್ಳಿ : ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೋರ್ವನನ್ನು ಅಪಹರಿಸಿ ಥಳಿಸಿರುವ ಘಟನೆಯೊಂದು ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ನಡೆದಿದೆ.
ಹುಡುಗಿ ವಿಚಾರವಾಗಿ ವ್ಯಕ್ತಿಯೋರ್ವನನ್ನು ಹಿಗ್ಗಾಮುಗ್ಗ ಥಳಿಸಲಾಗಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿ ಥಳಿಸಿದ್ದಾರೆ. ನಗರದ ರಾಜಗೋಪಲ ನಗರ ನಿವಾಸಿ ವಿನಾಯಕ ಭಂಡಾರಿ ಎಂಬಾತನನ್ನು ಥಳಿಸಿದ್ದಾರೆ. ವಿನಾಯಕ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪೃಥ್ವಿ ಮತ್ತು ಸಹಚರರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ವಿನಾಯಕ ಇಂದಿರಾ ನಗರದಲ್ಲಿದ್ದ ತನ್ನ ಪತ್ನಿಯ ಸಹೋದರಿಯನ್ನು ಪ್ರೀತಿಸಿದ್ದ. ಮೂರು ವರ್ಷದ ಹಿಂದೆ ಬ್ರೇಕ್ ಆಪ್ ಆಗಿತ್ತು. ನಂತರ ಆರೋಪಿ ಪೃಥ್ವಿಯನ್ನು ಯುವತಿ ಪ್ರೀತಿಸುತ್ತಿದ್ದಳು. ಹೀಗಾಗಿಯೇ ನನ್ನನ್ನು ಥಳಿಸಿದ್ದಾರೆಂದು ವಿನಾಯಕ ಆರೋಪಿಸಿದ್ದಾರೆ.
ಹುಡುಗಿ ಆತನಿಗೆ ಏನು ಹೇಳಿದ್ದಾಳೋ ಗೊತ್ತಿಲ್ಲಾ. ಆಕೆಯ ಮಾತನ್ನು ಕೇಳಿ ಹಲ್ಲೆ ಮಾಡಿದ್ದಾರೆ ಎಂದು ವಿನಾಯಕ ಆರೋಪಿಸಿದ್ದಾನೆ. ಕಬ್ಬಿಣದ ರಾಡ್ ನಿಂದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಭಾನುವಾರ ಕಮರಿಪೇಟೆ ಪೊಲೀಸ್ ಠಾಣೆ ಎದುರು ನಿಂತಿದ್ದ ವೇಳೆ ಅಪರಹರಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಸದ್ಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.