ನವದೆಹಲಿ: ಮತ್ತೆ ಕೋವಿಡ್ ಮಹಾಮಾರಿ ಜಗತ್ತಿನಾದ್ಯಂತ ಆಘಾತ ಸೃಷ್ಟಿಸುತ್ತಿದೆ. ಕೇರಳದಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮೇ ತಿಂಗಳಲ್ಲಿ ಇಲ್ಲಿಯವರೆಗೆ 182 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಜಾಗರೂಕರಾಗಿರುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕೋವಿಡ್ -19 ಪ್ರಕರಣಗಳನ್ನು ಎದುರಿಸಲು ರಾಜ್ಯದ ಸನ್ನದ್ಧತೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವೆ ವೀಣಾ, ಹಾಂಗ್ ಕಾಂಗ್, ಸಿಂಗಾಪುರದಂಥ ದೇಶಗಳಲ್ಲಿ ಒಮಿಕ್ರಾನ್ ಜೆಎನ್ 1 ಉಪತಳಿ ಎಲ್ಎಫ್.7 ಮತ್ತು ಎನ್ಬಿ.1.8 ಹಬ್ಬುತ್ತಿದ್ದು, ಇದು ಅತ್ಯಂತ ವೇಗವಾಗಿ ಸೋಂಕನ್ನು ಹಬ್ಬಿಸುತ್ತಿವೆ. ಇದರಿಂದಾಗಿಯೇ ನೈರುತ್ಯ ಏಷ್ಯಾ ಪ್ರದೇಶಗಳಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಕೇರಳದಲ್ಲೂ ಕೋವಿಡ್ 19 ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ಇದು ತೀರ ಗಂಭೀರ ಸಮಸ್ಯೆಯಲ್ಲ, ಸ್ವಯಂ ರಕ್ಷಣೆ ಮಾತ್ರ ಮುಖ್ಯ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ ಒಟ್ಟು 182 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಅತ್ಯಧಿಕ 57 ಕೇಸುಗಳು ಕೊಟ್ಟಾಯಂನಲ್ಲಿ ದಾಖಲಾಗಿವೆ. ಎರ್ನಾಕುಳಂನಲ್ಲಿ 34 ಪ್ರಕರಣಗಳು, ತಿರುವನಂತಪುರಂನಲ್ಲಿ 30 ಪ್ರಕರಣಗಳು ದಾಖಲಾಗಿವೆ. ಉಳಿದ ಎಲ್ಲ ಸೋಕು ಪ್ರಕರಣಗಳು ಬೇರೆ ಬೇರೆ ಜಿಲ್ಲೆಗಳಿಗೆ ಹಂಚಿಕೆಯಾಗಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲು ಮತ್ತು ಭವಿಷ್ಯದ ಕ್ರಿಯಾಯೋಜನೆಗಳ ಕುರಿತು ಚರ್ಚಿಸಲು ರಾಜ್ಯ ಕ್ಷಿಪ್ರ ಪ್ರತಿಕ್ರಿಯಾ ತಂಡದ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ರೋಗಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆ ಹೆಚ್ಚಿಸಲು, ಎಲ್ಲ ಆಸ್ಪತ್ರೆಗಳಲ್ಲೂ ಆರ್ಟಿಪಿಸಿಆರ್ ಕಿಟ್ ಗಲು, ಸುರಕ್ಷತಾ ಸಾಧನಗಳ ಲಭ್ಯತೆಗಳನ್ನು ನೋಡಿಕೊಳ್ಳಲು, ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.
ಶೀತ, ಗಂಟಲು ನೋವು, ಕೆಮ್ಮು, ಉಸಿರಾಟದ ತೊಂದರೆ ಇರುವವರು ಮಾಸ್ಕ್ ಧರಿಸಬೇಕು. ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಕೂಡ ಸಾರ್ವಜನಿಕ ಪ್ರದೇಶಗಳು ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸಬೇಕು ಎಂದು ಸಚಿವೆ ಜಾರ್ಜ್ ನಾಗರಿಕರಿಗೆ ಸೂಚಿಸಿದ್ದಾರೆ.