ಅಲ್ವಾರ್: ಪ್ರಿಯಕರ ಮತ್ತು ಗುತ್ತಿಗೆ ಕೊಲೆಗಾರರೊಂದಿಗೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿದ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ಇತ್ತೀಚೆಗೆ ನಡೆದಿದ್ದು, ಈ ಕೊಲೆಗೆ ಆಕೆಯ 9 ವರ್ಷದ ಪುತ್ರನೇ ಸಾಕ್ಷಿ ನುಡಿದಿದ್ದಾನೆ!
ಅಲ್ವಾರ್ನ ಖೇರ್ಲಿ ಪ್ರದೇಶದಲ್ಲಿ ಜೂನ್ 7ರಂದು ಈ ಕೊಲೆ ನಡೆದಿತ್ತು. ವೀರು ಅಲಿಯಾಸ್ ಮನ್ ಸಿಂಗ್ ಜಾಟವ್ ಅವರ ಮೃತದೇಹ ಅವರ ಮನೆಯಲ್ಲೇ ಪತ್ತೆಯಾಗಿತ್ತು. ಆರಂಭದಲ್ಲಿ ವೀರು ಅವರ ಪತ್ನಿ ಅನಿತಾ ಅವರು, ತಮ್ಮ ಪತಿಯ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡುಬಂದು, ಬಳಿಕ ಅವರು ಕೊನೆಯುಸಿರೆಳೆದರು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ, ಅವರ 9 ವರ್ಷದ ಮಗ ನೀಡಿದ ಹೇಳಿಕೆಯಿಂದಾಗಿ 48 ಗಂಟೆಗಳಲ್ಲೇ ಕೊಲೆ ರಹಸ್ಯ ಬಯಲಾಗಿದೆ.
ಪುತ್ರ ಹೇಳಿದ್ದೇನು?
ಅಂದು ರಾತ್ರಿ ನಾನು ಮತ್ತು ಅಪ್ಪ ಅಕ್ಕಪಕ್ಕ ಮಲಗಿದ್ದೆವು. ಮಧ್ಯರಾತ್ರಿ ಬಾಗಿಲ ಬಳಿ ಶಬ್ದ ಆದಾಗ ನನಗೆ ಎಚ್ಚರವಾಯಿತು. ನಾನು ಕಣ್ಣು ಬಿಟ್ಟು ನೋಡುವಾಗ ನನ್ನ ಅಮ್ಮ ಮನೆಯ ಹೊರಭಾಗದ ಗೇಟನ್ನು ತೆರೆದಿದ್ದರು. ಆಗ ಕಾಶಿ ಅಂಕಲ್(ಅನಿತಾ ಅವರ ಪ್ರಿಯಕರ ಕಾಶಿರಾಮ್ ಪ್ರಜಾಪ್ರತ್) ಮತ್ತು ನಾಲ್ವರು ವ್ಯಕ್ತಿಗಳು ನಮ್ಮ ಮನೆಯೊಳಕ್ಕೆ ಬಂದರು. ಅವರ ನನ್ನ ಅಪ್ಪನನ್ನು ಸಮೀಪಿಸುತ್ತಿದ್ದಂತೆ ನನಗೆ ಭಯವಾಯಿತು. ನಾನು ಕಣ್ಣು ಮುಚ್ಚಿ ಮಲಗಿದಂತೆ ನಟಿಸಿದೆ.
ಮಲಗಿದ್ದ ನನ್ನ ಅಪ್ಪನ ಮುಖಕ್ಕೆ ಕಾಶಿ ಅಂಕಲ್ ತಲೆದಿಂಬನ್ನು ಒತ್ತಿ ಹಿಡಿದರು. ಆಗ ಅಪ್ಪ ಒದ್ದಾಡತೊಡಗಿದರು. ಕೂಡಲೇ ಉಳಿದ ನಾಲ್ವರು ಅಪ್ಪನ ಕಾಲುಗಳನ್ನು ತಿರುಚಿ, ಹೊಡೆದರು. ಇದೆಲ್ಲ ನಡೆಯುವಾಗ ಅಮ್ಮ ಬೆಡ್ ಪಕ್ಕದಲ್ಲಿ ನಿಂತಿದ್ದರು. ನಾನು ಭಯಭೀತನಾಗಿ ಎದ್ದು ಕುಳಿತು ಅಪ್ಪನನ್ನು ಅಪ್ಪಿಕೊಳ್ಳಲು ಹೋದೆ. ಆಗ ಕಾಶಿ ಅಂಕಲ್ ನನ್ನನ್ನು ಎಳೆದು, ಸುಮ್ಮನಿರುವಂತೆ ಬೆದರಿಕೆ ಹಾಕಿದರು. ಭಯದಿಂದ ನಾನು ಸುಮ್ಮನಾದೆ, ಕೆಲವೇ ನಿಮಿಷಗಳಲ್ಲಿ ಅಪ್ಪನ ಉಸಿರು ನಿಂತಿತು. ನಂತರ ಎಲ್ಲರೂ ಹೊರಟುಹೋದರು ಎಂದು ಬಾಲಕ ಎಳೆಎಳೆಯಾಗಿ ಕೊಲೆಯ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ಅನಿತಾ ಮತ್ತು ಕಾಶಿರಾಮ್ ಮೊದಲೇ ಈ ಕೊಲೆಗೆ ಸಂಚು ರೂಪಿಸಿದ್ದರು. ಇವರಿಬ್ಬರ ಅಕ್ರಮ ಸಂಬಂಧವೇ ಈ ಕೊಲೆಗೆ ಕಾರಣ. ನಾಲ್ವರು ಕೊಲೆಗಾರರಿಗೆ 2 ಲಕ್ಷ ರೂ. ನೀಡಿ ವೀರುರನ್ನು ಕೊಲ್ಲಲು ಇವರಿಬ್ಬರೂ ಸಂಚು ರೂಪಿಸಿದ್ದರು. ಅದರಂತೆ, ಕೊಲೆಯ ಕೆಲಸ ಮುಗಿಸಿದ್ದರು.
ಮಾರನೇ ದಿನ ಅನಿತಾ ಅವರು ಪತಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾರೆಂದು ಸಂಬಂಧಿಕರ ಬಳಿ ಹೇಳಿಕೊಂಡಿದ್ದರು. ಆದರೆ, ವೀರು ಅವರ ದೇಹದಲ್ಲಿ ಗಾಯದ ಗುರುತುಗಳಿದ್ದವು. ಹಲ್ಲುಗಳು ಮುರಿದಿದ್ದವು, ಉಸಿರಾಡಲು ಸಮಸ್ಯೆಯಾಗಿದ್ದು ಗೊತ್ತಾಗುತ್ತಿತ್ತು. ಇವೆಲ್ಲವೂ ಪೊಲೀಸರಲ್ಲಿ ಅನುಮಾನ ಮೂಡಲು ಕಾರಣವಾಯಿತು. ಮರಣೋತ್ತರ ಪರೀಕ್ಷೆಯು ವೀರು ಅವರದ್ದು ಕೊಲೆ ಎಂಬುದನ್ನು ದೃಢಪಡಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈಗ ಅನಿತಾ, ಕಾಶಿರಾಮ್ ಮತ್ತು ಇತರೆ ನಾಲ್ವರು ಕೊಲೆಗಾರರನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.