ಕನ್ನಡದ ಹಾಡು ಹಾಡುವಂತೆ ಕೋರಿದ್ದಕ್ಕೆ ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಸಿದ ತಪ್ಪಿಗೆ ಈಗ ಗಾಯಕ ಸೋನು ನಿಗಮ್ ಬೆಲೆ ತೆತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಾಡುವ ಅವಕಾಶವನ್ನು ನಿಷೇಧಿಸಿ ಕರ್ನಾಟಕ ಫಿಲ್ಮ್ ಚೇಂಬರ್ ನಿರ್ಧಾರ ಕೈಗೊಂಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಸೋನು ನಿಗಮ್ ಗೆ ಅಭಿಮಾನಿಯೊಬ್ಬ ಕನ್ನಡದ ಹಾಡು ಹಾಡುವಂತೆ ಕೋರಿದ್ದ.ಇದಕ್ಕೆ ಕೆರಳಿದ್ದ ಸೋನು, ನಿಮ್ಮ ಈ ವರ್ತನೆಯಿಂದಲೇ ಪಹಲ್ಗಾಮ್ ನಲ್ಲಿ ನರಮೇಧ ನಡೆದಿದ್ದು ಅಂತಾ ಹೇಳುವ ಮೂಲಕ ಕನ್ನಡಿಗರ ಅಸ್ಮಿತೆಯನ್ನು ಕೆಣಕಿದ್ರು. ಇದರಿಂದಾಗಿ ಗಾಯಕನಿಗೆ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ವು. ಈ ವಿಚಾರವಾಗಿ ಕ್ಷಮೆ ಕೇಳಿ ತೆಪ್ಪಗಾಗೋ ಬದಲಿಗೆ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಸೋನು, ಕನ್ನಡಿಗರನ್ನು ಪುಂಡರು ಎನ್ನುವಂತೆ ಬಿಂಬಿಸಿ ಮತ್ತಷ್ಟು ಕೆಂಗಣ್ಣಿಗೆ ಗುರಿಯಾಗಿದ್ರು.
ಇದೆಲ್ಲದರ ಫಲ ಎನ್ನುವಂತೆ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ಗಾಯಕನನ್ನು ನಿಷೇಧಿಸಿ ನಿರ್ಧಾರ ಕೈಗೊಂಡಿದೆ. ಯಾವ ಸಂಗೀತ ನಿರ್ದೇಶಕರೂ ಕನ್ನಡ ಸಿನಿಮಾದಲ್ಲಿ ಸೋನು ನಿಗಮ್ ರಿಂದ ಹಾಡನ್ನು ಹಾಡಿಸದಂತೆ ಚೇಂಬರ್ ಅಧ್ಯಕ್ಷ ನರಸಿಂಹಲು ನೇತೃತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.