ಕನ್ನಡ ಭಾಷೆಯ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್(Kamal Haasan) ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ.
ಕಮಲ್ ಉದ್ಧಟತನ ಮೆರೆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಕಮಲ್ ಕ್ಷಮೆ ಕೇಳದ ಹೊರತು ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ. ಈ ಮಧ್ಯೆ ಕಮಲ್ ಕೋರ್ಟ್ ಮೊರೆ ಹೋಗಿದ್ದಾರೆ. ಆದರೂ ಕನ್ನಡಿಗರು ಪಟ್ಟು ಬದಲಿಸುತ್ತಿಲ್ಲ. ಈ ಮಧ್ಯೆ ತಮಿಳಿಗರ ಮನ ಗೆಲ್ಲಲು ಮುಂದಾಗಿದ್ದಾರೆ.
ಹೈಕೋರ್ಟ್ ಆದೇಶದ ನಂತರ ಮಾತನಾಡಿದ ಅವರು, ಭಾಷಾ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ‘ನನ್ನ ಬೆಂಬಲಕ್ಕೆ ನಿಂತ ತಮಿಳುನಾಡಿನ ಜನರಿಗೆ ಧನ್ಯವಾದ. ‘ಉಯಿರೆ, ಉರವೆ, ತಮಿಳೆ’ (ಜೀವನ, ಬಾಂಧವ್ಯ (ಸಂಬಂಧ), ತಮಿಳು ಭಾಷೆ-ತಮಿಳು ಸಂಸ್ಕೃತಿ) ಇದರ ಅರ್ಥ ನನಗೆ ಚೆನ್ನಾಗಿ ಗೊತ್ತಿದೆ, ನಾನು ಇದನ್ನು ಬಿಟ್ಟು ಕದಲುವುದಿಲ್ಲ’ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಸಹ ಕಮಲ್ ಅವರ ಅಭಿಮಾನಿಗಳು ಕೆಲ ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ‘ಕಮಲ್ ಹಾಸನ್ ಅವರು ತಮಗೆ 30-40 ಕೋಟಿ ರೂಪಾಯಿ ಹಣ ನಷ್ಟವಾದರೂ ಸಹ ತಮಿಳು ಭಾಷೆಯ ಪರವಾಗಿ ನಿಂತಿದ್ದಾರೆ. ಅವರು ಸತ್ಯ ಹೇಳಿದ್ದಕ್ಕೆ (?) ಸಮಸ್ಯೆ ಎದುರಿಸುತ್ತಿದ್ದಾರೆ. ನಷ್ಟವಾದರೂ ಭಾಷೆಯ ಪರ ನಿಂತಿದ್ದಾರೆ ಎಂಬ ರೀತಿಯಲ್ಲಿ ಸಂದೇಶ ಬರೆಯುತ್ತಿದ್ದಾರೆ. ಆದರೆ, ಕನ್ನಡಿಗರು ಕೂಡ ಇದಕ್ಕೆ ಟಾಂಗ್ ನೀಡುತ್ತಿದ್ದಾರೆ. ಕ್ಷಮೆ ಕೇಳದ ಹೊರತು, ಕರ್ನಾಟಕದಲ್ಲಿ ಕಮಲ್ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಕನ್ನಡಿಗರು ಪಟ್ಟು ಹಿಡಿದಿದ್ದಾರೆ.