ಲಖನೌ: ಮಂಗಳವಾರ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 6 ವಿಕೆಟ್ಗಳ ರೋಚಕ ಗೆಲುವು ಪಡೆದಿತ್ತು. ಆರ್ಸಿಬಿ ತಂಡದ ಗೆಲುವಿನ ಶ್ರೇಯ ಜಿತೇಶ್ ಶರ್ಮಾಗೆ ಸಲ್ಲಬೇಕು. ಇವರು ಆಡಿದ 33 ಎಸೆತಗಳಲ್ಲಿ ಅಜೇಯ 85 ರನ್ಗಳನ್ನು ಸಿಡಿಸಿ ಆರ್ಸಿಬಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ಜಿತೇಶ್ ಶರ್ಮಾ (jitesh Sharma), ತಮ್ಮ ಬ್ಯಾಟಿಂಗ್ ಯಶಸ್ಸಿನ ಶ್ರೇಯವನ್ನು ತಮ್ಮ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಲ್ಲಿಸಿದ್ದಾರೆ.
ಲಖನೌ ನೀಡಿದ್ದ 228 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ಆರ್ಸಿಬಿ ತಂಡ, ಉತ್ತಮ ಆರಂಭ ಪಡೆದ ಹೊರತಾಗಿಯೂ ಒಂದು ಹಂತದಲ್ಲಿ 123 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜತೆಯಾದ ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಐದನೇ ವಿಕೆಟ್ಗೆ 107 ರನ್ಗಳನ್ನು ಕಲೆ ಹಾಕಿದ್ದರು. ಅಲ್ಲದೆ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಜಿತೇಶ್ ಶರ್ಮಾ ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 85 ರನ್ಗಳನ್ನು ಸಿಡಿಸಿದರು. ಆ ಮೂಲಕ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಆರ್ಸಿಬಿ ತಂಡವನ್ನು ಗೆಲುವಿನ ದಡವನ್ನು ಸೇರಿಸಿದರು.
ತಮ್ಮ ಬ್ಯಾಟಿಂಗ್ ಗೇಮ್ಪ್ಲ್ಯಾನ್ ತಿಳಿಸಿದ ಜಿತೇಶ್
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಜಿತೇಶ್ ಶರ್ಮಾ, “ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಪ್ರದರ್ಶನವನ್ನು ತೋರುತ್ತೇನೆಂದು ನನಗೆ ನಂಬಲು ಆಗುತ್ತಿಲ್ಲ. ನಾನು ಸನ್ನಿವೇಶಕ್ಕೆ ಅಂಟಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದೆ ಹಾಗೂ ಚೆಂಡನ್ನು ಸಾಧ್ಯವಾದಷ್ಟು ಬಹಳ ಹತ್ತಿರದಿಂದ ನೋಡಲು ಪ್ರಯತ್ನಿಸುತ್ತಿದ್ದೆ,” ಎಂದು ಹೇಳಿದ್ದಾರೆ.
ತನ್ನ ಯಶಸ್ಸಿಗೆ ದಿನೇಶ್ ಕಾರ್ತಿಕ್ ಕಾರಣ
“ನ್ಯಾಯಯುತವಾಗಿರಲು ನಾನು ಏನನ್ನೂ ಯೋಚಿಸುತ್ತಿರಲಿಲ್ಲ. ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಳಿಕ, ನಾನು ಸಾಧ್ಯವಾದಷ್ಟು ಕೊನೆಯವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿದ್ದೆ. ಇದನ್ನೆ ನನ್ನ ಗುರುಗಳಾದ ದಿನೇಶ್ ಕಾರ್ತಿಕ್ ಹೇಳಿದ್ದರು. ನೀವು ಯಾವ ಸನ್ನಿವೇಶದಲ್ಲಿ ಕ್ರೀಸ್ಗೆ ಹೋಗುತ್ತೀರಿ ಎಂಬುದು ಇಲ್ಲಿ ಮುಖ್ಯವಲ್ಲ, ನೀವು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಬೇಕಾಗುತ್ತದೆ ಹಾಗೂ ಪಂದ್ಯವನ್ನು ಮುಗಿಸಲು ನೀವು ಸಮರ್ಥರಿದ್ದೀರಿ ಎಂದು ಅವರು ನನಗೆ ತಿಳಿಸಿದ್ದರು,” ಎಂದು ಜಿತೇಶ್ ಶರ್ಮಾ ತಿಳಿಸಿದ್ದಾರೆ.
ನನ್ನ ಮೇಲೆ ಜಾಸ್ತಿ ಒತ್ತಡವಿತ್ತು: ಜಿತೇಶ್ ಶರ್ಮಾ
“ನನ್ನ ಮೇಲೆ ಜಾಸ್ತಿ ಒತ್ತಡವಿದ್ದ ಕಾರಣ, ನನಗೆ ಸೆಳೆತ ಉಂಟಾಗುತ್ತಿತ್ತು. ಇದು ದೊಡ್ಡ ಫ್ರಾಂಚೈಸಿಯಾಗಿದೆ ಹಾಗೂ ಒತ್ತಡವನ್ನು ನಾನು ಆನಂದಿಸುತ್ತಿದ್ದೇನೆ. ನಮ್ಮ ಬಳಿ ಸಾಕಷ್ಟು ಅನುಭವಿ ಆಟಗಾರರು ಇದ್ದಾರೆ. ಭುವಿ ಭಾಯ್, ವಿರಾಟ್ ಭಾಯ್ ಹಾಗೂ ಕೃಣಾಲ್ ಭಾಯ್. ಅವರ ಜೊತೆ ಆಡುವಾಗ ತುಂಬಾ ಉತ್ಸುಕತೆಯಿಂದ ಇರುತ್ತೇನೆ ಹಾಗೂ ಅಲ್ಲಿ ಉಂಟಾಗಿರುವ ಒತ್ತಡವನ್ನು ನಾನು ಆನಂದಿಸುತ್ತೇನೆ,” ಎಂದು ಆರ್ಸಿಬಿ ಹಂಗಾಮಿ ನಾಯಕ ಹೇಳಿದ್ದಾರೆ.
ಮೇ 29 ರಂದು ಮೊದಲನೇ ಕ್ವಾಲಿಫೈಯರ್
ಲಖನೌ ಸೂಪರ್ ಜಯಂಟ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಆರ್ಸಿಬಿ ತಂಡ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ ಹಾಗೂ ಮೊದಲನೇ ಕ್ವಾಲಿಫೈಯರ್ಗೆ 8 ವರ್ಷಗಳ ಬಳಿಕ ಲಗ್ಗೆ ಇಟ್ಟಿದೆ. ಮೇ 29 ರಂದು ಗುರುವಾರ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಕಾದಾಟ ನಡೆಸಲಿದೆ. ಈ ಪಂದ್ಯವನ್ನು ಗೆದ್ದರೆ ಬೆಂಗಳೂರು ತಂಡ ಫೈನಲ್ಗೆ ಪ್ರವೇಶ ಮಾಡಲಿದೆ. ಒಂದು ವೇಳೆ ಸೋತರೆ ಎರಡನೇ ಕ್ವಾಲಿಫೈಯರ್ ಆಡಬೇಕಾಗುತ್ತದೆ.