ಕೋಲಾರ ಮೂಲದ ಜಿಮ್ ರವಿ ಇತ್ತೀಚೆಗಷ್ಟೇ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಲ್ಲದೇ, ರವಿ ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರು ಮಾಡಿದ್ದಾರೆ. ಈಗ ತಂದೆಯ ಆಸೆಯಂತೆ 101 ಜನರಿಗೆ ಕಾಶಿಯಾತ್ರೆ ಮಾಡಿಸುತ್ತಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಮ್ಮದು ಕೋಲಾರದಲ್ಲಿ ಮಧ್ಯಮವರ್ಗದ ಕುಟುಂಬ. ದಿನ ಮುದ್ದೆ ತಿನ್ನುತ್ತಿದ್ದ ನಾವು ಹಬ್ಬಗಳಲ್ಲೇ ಅನ್ನ ಉಣ್ಣುತ್ತಿದ್ದದ್ದು. ಆದರೆ ನನ್ನ ತಾಯಿ ನನಗೆ ತುಂಬಾ ಆದರ್ಶ. ಜೀವನದ ಪಾಠ ಕಲಿಸಿದ ಮಹಾತಾಯಿ ಅವರು. ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ಪರವಾಗಿಲ್ಲ. ಕಷ್ಟದಲ್ಲಿ ಅವರ ಜೊತೆಗಿರು. ಹಿರಿಯರ ಮುಂದೆ ಕೈ ಕಟ್ಟಿ ನಿಲ್ಲು ಅಂತ ಅಮ್ಮ ಹೇಳಿಕೊಟ್ಟಿದ್ದಾರೆ. ಹೀಗಾಗಿ ಜೀವನ ಸಾಗುತ್ತಿದ್ದಾಗ ಅಮ್ಮ ನಮ್ಮನ್ನು ಬಿಟ್ಟು ಹೋಗುತ್ತಾರೆ. ಅಮ್ಮನ ನಿಧನದ ಕೆಲವು ತಿಂಗಳ ನಂತರ ಅಪ್ಪ, ನನ್ನ ಹತ್ತಿರ ಬಂದು ನಿಮ್ಮ ಅಮ್ಮನ ಸಾವಿನಿಂದ ಬಹಳ ದುಖವಾಗಿದೆ. ಹೀಗಾಗಿ ನನ್ನನ್ನು ಕಾಶಿಯಾತ್ರೆಗೆ ಕರೆದುಕೊಂಡು ಹೋಗು ಎನ್ನುತ್ತಾರೆ.
ನನ್ನ ಹತ್ತಿರ ಆಗ ದುಡ್ಡು ಇರಲ್ಲ. ಅಪ್ಪನಿಗೆ ಏರು ದ್ವನಿಯಲ್ಲಿ ಈಗ ಅದೆಲಾ ಆಗಲ್ಲ ಅಂದು ಬಿಡುತ್ತೇನೆ. ಅದಾದ ಕೆಲವು ತಿಂಗಳ ನಂತರ ಮತ್ತೆ ಕೇಳುತ್ತಾರೆ. ನಾನು ಅವರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಸಮಾಧಾನ ಮಾಡುತ್ತೇನೆ. ಕೆಲವು ದಿನಗಳ ನಂತರ ಗೆಳೆಯರ ಹತ್ತಿರ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೇಟ್ ಬುಕ್ ಮಾಡುತ್ತೇನೆ. ಆ ವಿಷಯ ಅಪ್ಪನಿಗೆ ಫೋನ್ ಮಾಡಿ ಹೇಳುತ್ತೇನೆ. ಅವರು ಖುಷಿಯಾಗುತ್ತಾರೆ. ಆದರೆ ವಿಧಿಯೇ ಬೇರೆ ಆಗಿರುತ್ತದೆ. ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪ ನಮ್ಮನ್ನು ಬಿಟ್ಟು ಹೋದರು. ಅವರ ಕಾಶಿಯಾತ್ರೆಯ ಆಸೆಯೂ ಅವರ ಜೊತೆಗೆ ಹೋಗಿ ಬಿಡುತ್ತದೆ. ಹೀಗಾಗಿ ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ ಕೆಲವು ಅಶಕ್ತರಿಗೆ ನಮ್ಮ ಅಪ್ಪನ ಹೆಸರಿನಲ್ಲಿ ಯಾತ್ರೆ ಮಾಡಿಸಲು ಮುಂದಾಗಿದ್ದೇನೆ ಎಂದಿದ್ದಾರೆ.
ನಮ್ಮ ಅಪ್ಪ ನಿಧನರಾಗಿ ಹದಿನಾಲ್ಕು ವರ್ಷಗಳಾಯಿತು. ಅಂದಿನಿಂದ ಇಂದಿನವರೆಗೂ ಅದಕೋಸ್ಕರ ಹುಂಡಿ ಇಟ್ಟು ದುಡ್ಡು ಕೂಡಿ ಹಾಕುತ್ತಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ವಾಣಿಜ್ಯ ತೆರೆಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ಈಗ ಜುಲೈ 2 ನೇ ತಾರೀಖು ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಅವರ ಜೊತೆ 101 ಜನರ ತಂಡ ಪಯಣ ಬೆಳೆಸುತ್ತಿದ್ದೇವೆ ಎಂದಿದ್ದಾರೆ.
ಅವರು ಊರಿನಿಂದ ಬರುವ ಪ್ರಯಾಣದ ವೆಚ್ಚದಿಂದ ಹಿಡಿದು ಎಲ್ಲ ವ್ಯವಸ್ಥೆಯನ್ನು ನಾವೇ ಮಾಡುತ್ತಿದ್ದೇವೆ. ಜುಲೈ 2 ರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಮ ಜನ್ಮಭೂಮಿ ಅಯೋಧ್ಯೆಗೆ ಪಯಣ. ಅಲ್ಲಿಂದ ಪ್ರಯಾಗರಾಜ. ಅಲ್ಲಿಂದ ಕಾಶಿ. ಒಟ್ಟು ಮೂರು ದಿನಗಳ ಯಾತ್ರೆ ಇದು. ಎಲ್ಲಾ ಕಡೆ ಎಸಿ ವಾಹನ ಹಾಗೂ ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನಮ್ಮ ಜೊತೆಗೆ ವೈದ್ಯರು ಹಾಗೂ ಸ್ವಯಸೇವಕರು ಇರುತ್ತಾರೆ. ಆಹ್ವಾನಿಸಿದ ಅತಿಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದಿದ್ದಾರೆ.
ಈ ವೇಳೆ ಶ್ರೀರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್ ಇದ್ದರು.