ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಜನರೊಂದಿಗೆ ಜನತಾದಳ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಸೀಟ್ ತರುವ ಜವಾಬ್ದಾರಿ ನನ್ನದು. ಆದರೆ, ಕಾರ್ಯಕರ್ತರೇ ಕ್ಷೇತ್ರ ಗಟ್ಟಿಗೊಳಿಸಬೇಕು ಎಂದು ಹೇಳಿದ್ದಾರೆ. “ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಸೀಟ್ ತರುವ ಜವಾಬ್ದಾರಿ ನನ್ನದು, ಕಾರ್ಯಕರ್ತರು ಕ್ಷೇತ್ರವನ್ನು ಗಟ್ಟಿಗೊಳಿಸಬೇಕು. ಎಲ್ಲವೂ ಕೇಂದ್ರದಲ್ಲಿ ನಿರ್ಧಾರವಾಗುತ್ತದೆ”.ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಸೋಲಿಸಿ ‘ಮನೆಗೆ ಕಳಿಸುವವರೆಗೆ ವಿರಮಿಸುವುದಿಲ್ಲ’ ಎಂದು ಶಪಥ ಮಾಡಿದರು.
“ನನ್ನ ಬಳಿಗೆ ಶ್ರೀಮಂತರು ಬರುವುದಿಲ್ಲ, ಬಡವರೇ ಬರುತ್ತಾರೆ. 16 ಲಕ್ಷ ರೂ. ಆಸ್ಪತ್ರೆ ಬಿಲ್ ಹಿಡಿದು ಒಬ್ಬರು ಬಂದಿದ್ದರು. ಇದನ್ನು ಕುಟುಂಬದ ಪಕ್ಷ ಎನ್ನುತ್ತೀರಾ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮನೆ ಮುಂದೆ ಇಂಥವರು ಬರುತ್ತಾರೆಯೇ?” ಎಂದು ಪ್ರಶ್ನಿಸಿದರು.
ಡಿಕೆ ಶಿವಕುಮಾರ್ಗೆ ಟಾಂಗ್ ನೀಡಿದ ಅವರು, “ನಾನು ಕೇಂದ್ರದ ಉಕ್ಕಿನ ಸಚಿವನಾಗಿರಬಹುದು, ಆದರೆ ಜೆಪಿ ನಗರಕ್ಕೆ ಸೂಟ್-ಬೂಟ್ ಧರಿಸಿದವರು ಬರುವುದಿಲ್ಲ. ಆಸ್ಪತ್ರೆ, ಸಂಸಾರ, ಉದ್ಯೋಗದ ಕಷ್ಟದಿಂದ ಬರುವವರೇ ಹೆಚ್ಚು. ಡಿಕೆಶಿ ಮನೆಗೆ ಇವರು ಹೋಗುವುದಿಲ್ಲ. ನಮ್ಮದು 7 ಕೋಟಿ ಜನರ ಪಕ್ಷ, ಅಧಿಕಾರದಲ್ಲಿರಲಿ, ಇರದಿರಲಿ, ಜನರೊಂದಿಗೆ ಇರುತ್ತದೆ” ಎಂದರು.
ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಸವಾಲು
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮತ್ತು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, “ಸಿಎಂ ಕೇಂದ್ರದ ಕೃಷಿ ಸಚಿವರಿಗೆ ಮಾವಿಗೆ ಬೆಂಬಲ ಬೆಲೆ ಕೇಳಿ ಪತ್ರ ಬರೆದಿದ್ದಾರೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ದೆಹಲಿಯಲ್ಲಿ ಟೊಮೆಟೊ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಿದ್ದೆ. ಇದೇ ಜೆಡಿಎಸ್-ಕಾಂಗ್ರೆಸ್ ವ್ಯತ್ಯಾಸ. ಖರ್ಗೆ 40 ವರ್ಷ ಶಾಸಕರಾಗಿ, 20 ವರ್ಷ ಮಂತ್ರಿಯಾಗಿದ್ದರೂ ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದಾರೆ? ಗುರುಮಿಠಕಲ್ಗೆ ಏನು ಕೊಡುಗೆ ನೀಡಿದ್ದಾರೆ?” ಎಂದು ಸವಾಲು ಹಾಕಿದರು. “ಬೆಂಗಳೂರನ್ನು ಸಿಂಗಾಪುರ ಮಾಡುತ್ತಾರಂತೆ, ಆದರೆ ಸಾಯಿ ಲೇಔಟ್ನ ಸ್ಥಿತಿ ಏನಾಗಿತ್ತು?” ಎಂದು ವ್ಯಂಗ್ಯವಾಡಿದರು.
ಆರೋಗ್ಯದ ಊಹಾಪೋಹಗಳಿಗೆ ತೆರೆ:
ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದ ಕುಮಾರಸ್ವಾಮಿ, “ನಾನು ಆರೋಗ್ಯವಾಗಿದ್ದೇನೆ, ಇನ್ನೂ 15-20 ವರ್ಷ ಜನರೊಂದಿಗಿರುತ್ತೇನೆ. ಕಾಂಗ್ರೆಸ್ ‘ಕುಮಾರಸ್ವಾಮಿ ಆರೋಗ್ಯ ಕೆಟ್ಟಿದೆ’ ಎಂದು ಶಾಸಕರನ್ನು ಕರೆಯುತ್ತಿದೆ. ಯಾರೂ ಆತಂಕಪಡಬೇಡಿ” ಎಂದರು. ಕಾಂಗ್ರೆಸ್ನ ಗೃಹಲಕ್ಷ್ಮೀ ಯೋಜನೆಗೆ ಟಾಂಗ್ ನೀಡಿದ ಅವರು, “ಜನರ ಮೇಲೆ ತೆರಿಗೆ ಹಾಕಿ 5,000 ರೂ. ಕೊಡುವುದಾದರೆ ನಾನೂ ಕೊಡುತ್ತೇನೆ” ಎಂದರು.