ಹುಬ್ಬಳ್ಳಿ : ಮಾನವನು ನಿತ್ಯದ ಇಷ್ಟಲಿಂಗಾರ್ಚನೆಯ ಅನುಸಂಧಾನದ ಶಿವಯೋಗ ಸಾಧನೆಯಲ್ಲಿ ಶಿವಪಂಚಾಕ್ಷರಿ ಮಹಾಮಂತ್ರದ ತನ್ಮಯತೆಯಿಂದ ಬಯಲಬೆಳಗು ಕಾಣಲು ಸಾಧ್ಯವಾಗುತ್ತದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಕಲಬುರ್ಗಿ ಮಹಾನಗರದ ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ಕುರಿತು ನಡೆದ ಚಿಂತನ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ದೇಹದ ಮೇಲೆ ಶಾಶ್ವತವಾಗಿ ಇಷ್ಟಲಿಂಗದ ಧಾರಣೆ ಹಾಗೂ ನಿತ್ಯದಲ್ಲಿ ನಡೆಸುವ ಇಷ್ಟಲಿಂಗಾರ್ಚನೆಯು ಋಣಾತ್ಮಕ ಬಂಧನದಿಂದ ಬದುಕನ್ನು ಮುಕ್ತಗೊಳಿಸಿ ಧನಾತ್ಮಕ ಶಕ್ತಿ ಸಂಚಯವನ್ನು ಅಧಿಕಗೊಳಿಸುತ್ತದೆ ಎಂದರು.
ಮುಕ್ತ ಪ್ರಾರ್ಥನೆ : ದೈವ ಸನ್ನಿಧಾನದಲ್ಲಿ ಭಕ್ತನು ದೇವರ ಪಾವನ ಸಾನ್ನಿಧ್ಯವನ್ನು ಮರೆತು ಅಲ್ಲಿ ಭಕ್ತಿಯ ಅನುಸಂಧಾನಕ್ಕೆ ತೆರೆದುಕೊಳ್ಳದೇ ತನ್ನ ಸಾಂಸಾರಿಕ ಮಾಯೆಯ ಒತ್ತಡದಲ್ಲಿ ಸುಖ, ಸಂಪತ್ತು, ಅಧಿಕಾರ, ಒಡೆತನಗಳನ್ನೇ ಕೇಂದ್ರೀಕರಿಸಿ ಸಲ್ಲಿಸುವ ಪ್ರಾರ್ಥನೆಗಳಿಂದ ಮಾನವನ ಜೀವನ ವಿಧಾನಕ್ಕೆ ಸದ್ಗತಿ ಪ್ರಾಪ್ತವಾಗದೇ ಮತ್ತೆ ಮತ್ತೆ ಭವಚಕ್ರದಲ್ಲಿ ತಿರುಗುವಂತಾಗುತ್ತದೆ. ಭಗವತ್ ಸಾನ್ನಿಧ್ಯಕ್ಕೆ ಸಲ್ಲಿಸುವ ಮುಕ್ತ ಪ್ರಾರ್ಥನೆಯಿಂದ ಮಾತ್ರ ಸಾಕ್ಷಾತ್ಕಾರ ಸಂಪಾದಿಸಲು ಸಾಧ್ಯವಾಗುತ್ತದೆ ಎಂದೂ ಕಾಶಿ ಜಗದ್ಗುರುಗಳು ಹೇಳಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಬಾರ್ಷಿಯ ದೈವಾಡಕರಮಠದ ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಸುಲೇಪೇಠ ಹಾಗೂ ಕಡಗಂಚಿಯ ಕಿರಿಯ ಶ್ರೀಗಳು, ಸೋಮಯ್ಯಶಾಸ್ತಿç, ಮಲ್ಲಿಕಾರ್ಜುನ ಶಾಸ್ತಿç, ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಅಧ್ಯಕ್ಷ ಅಮೃತಪ್ಪ ಮಲಕಪ್ಪಗೌಡ, ಚಂದ್ರಕಾAತ ಭೂಸನೂರ ಇದ್ದರು. ಸುಂಟನೂರಿನ ಸಿದ್ದೇಶ್ವರ ಶಾಸ್ತಿç ಸ್ವಾಗತಿಸಿದರು. ಶಿವಯ್ಯ ಮಠಪತಿ ನಿರೂಪಿಸಿದರು. ಸಿದ್ರಾಮಪ್ಪ ಆಲಗೂಡಕರ ವಂದಿಸಿದರು. ಗುರುಲಿಂಗಯ್ಯ ಹಿತ್ತಲಶಿರೂರ ಹಾಗೂ ಮಹಾಂತಯ್ಯಸ್ವಾಮಿ ನಿಂಗದಳ್ಳಿ ಅವರು ಸಂಗೀತ ಕಾರ್ಯಕ್ರಮ ನೀಡಿದರು.