ಜೆರುಸಲೇಂ: ಇಸ್ರೇಲ್ ರಾಜಧಾನಿ ಜೆರುಸಲೇಂನ ಹೊರವಲಯದಲ್ಲಿ ಭಾರೀ ಕಾಡ್ಗಿಚ್ಚು ವ್ಯಾಪಿಸಿದ್ದು(Wildfire in Israel), ಇಸ್ರೇಲ್ ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ಕಾಡ್ಗಿಚ್ಚಿನ ಪರಿಣಾಮವಾಗಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ರಾಜಧಾನಿಯ ಮೇಲೆ ದಟ್ಟವಾದ ಹೊಗೆ ಆವರಿಸಿದೆ.
ಇದನ್ನು ಇಸ್ರೇಲ್ ಇತಿಹಾಸದಲ್ಲೇ ಅತಿ ಭೀಕರ ಕಾಡ್ಗಿಚ್ಚು ಎಂದು ಬಣ್ಣಿಸಲಾಗಿದೆ. ಬುಧವಾರ ಇಸ್ರೇಲ್ ಹುತಾತ್ಮ ಸೈನಿಕರ ಸ್ಮರಣ ದಿನವನ್ನು ಆಚರಿಸುತ್ತಿರುವ ಹೊತ್ತಲ್ಲೇ ಕಾಡ್ಗಿಚ್ಚು ಏಕಾಏಕಿ ಕಾಣಿಸಿಕೊಂಡಿದ್ದು, ಒಣ ಹವೆ ಮತ್ತು ಭಾರೀ ಗಾಳಿಯಿಂದಾಗಿ ಬೆಂಕಿಯು ವೇಗವಾಗಿ ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಗವಾಗಿ ವ್ಯಾಪಿಸುತ್ತಿರುವ ಜ್ವಾಲೆಯು ಜೆರುಸಲೇಂ ಅನ್ನು ಆವರಿಸುವ ಭೀತಿಯಿದ್ದು, ಎಲ್ಲರೂ ಎಚ್ಚರಿಕೆಯಿಂದಿರುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೂಚಿಸಿದ್ದಾರೆ. ಇದು “ಸ್ಥಳೀಯ ಮಟ್ಟಿಗೆ ವ್ಯಾಪಿಸಿರುವಂಥದ್ದಲ್ಲ. ಹೀಗಾಗಿ ಇದು ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಅವರು ಬಣ್ಣಿಸಿದ್ದಾರೆ. ಹೆಚ್ಚಿನ ಅಗ್ನಿಶಾಮಕ ಎಂಜಿನ್ ಗಳು ಮತ್ತು ಫೈರ್ ಬ್ರೇಕ್ಸ್ಗಳ ಅಗತ್ಯವನ್ನು ಒತ್ತಿಹೇಳಿದ ಅವರು, “ಜೆರುಸಲೇಂ ಅನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದ್ದಾರೆ.
ಹೆದ್ದಾರಿಯುದ್ದಕ್ಕೂ ಭಾರೀ ಪ್ರಮಾಣದ ಹೊಗೆ ಆವರಿಸಿರುವುದು ಕಂಡುಬಂದಿದೆ. ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲು ಸೇನೆಯನ್ನು ನಿಯೋಜಿಸಲಾಗಿದೆ.
ಸುಟ್ಟಗಾಯಗಳು ಮತ್ತು ಹೊಗೆಯನ್ನು ಸೇವಿಸಿ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ 23 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಇಸ್ರೇಲ್ ತುರ್ತು ವೈದ್ಯಕೀಯ ಸೇವೆ ಮ್ಯಾಗೆನ್ ಡೇವಿಡ್ ಅಡೋಮ್ (ಎಂಡಿಎ) ತಿಳಿಸಿದೆ. ಹಲವು ವರ್ಷಗಳಲ್ಲೇ ಮೊದಲ ಬಾರಿಗೆ ಸಂಭವಿಸಿದ ಈ ಭೀಕರ ಕಾಡ್ಗಿಚ್ಚಿನಿಂದ ನೂರಾರು ನಾಗರಿಕರು ಅಪಾಯದಲ್ಲಿದ್ದಾರೆ ಎಂದೂ ಸಂಸ್ಥೆ ಎಚ್ಚರಿಸಿದೆ.
ಬೆಂಕಿಯ ವ್ಯಾಪಿಸುವಿಕೆಯಿಂದಾಗಿ ಟೆಲ್ ಅವೀವ್ನಿಂದ ಜೆರುಸಲೇಂಗೆ ಸಂಪರ್ಕ ಕಲ್ಪಿಸುವ ಪ್ರಧಾನ ಹೆದ್ದಾರಿಯಾದ ರೂಟ್ 1 ಅನ್ನು ಮುಚ್ಚಲಾಗಿದೆ. ನಿವಾಸಿಗಳು ತಮ್ಮ ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಓಡಿಹೋಗಲಾರಂಭಿಸಿದ್ದಾರೆ. ರಸ್ತೆಯುದ್ದಕ್ಕೂ ಗಗನದಲ್ಲಿ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಾರದ ಹಿಂದಷ್ಟೇ ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳು ಸೇರಿದಂತೆ ಹೆದ್ದಾರಿ ಕಾರಿಡಾರ್ ಉದ್ದಕ್ಕೂ ಪೊಲೀಸರು ಹಲವು ಗ್ರಾಮಸ್ಥರನ್ನು ಸ್ಥಳಾಂತರಿಸಿದ್ದಾರೆ. ಯಾರೋ ಬೆಂಕಿ ಹಚ್ಚಿದ್ದೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ಅವರು ಅಂದಾಜಿಸಿದ್ದಾರೆ. ಅದರಂತೆ, ನಗರದ ದಕ್ಷಿಣ ಪ್ರದೇಶದಲ್ಲಿ ಹೊಲಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಆರೋಪದ ಮೇಲೆ ಪೂರ್ವ ಜೆರುಸಲೇಂ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಗ್ನಿಶಾಮಕ ಮುಖ್ಯಸ್ಥ ಇಯಾಲ್ ಕ್ಯಾಸ್ಪಿಯನ್ ಮಾತನಾಡಿ, ಪರಿಸ್ಥಿತಿ ಭೀಕರವಾಗಿದೆ: ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ನಮ್ಮ ವಿಮಾನಗಳಿಗೂ ಈಗ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ … ಜೀವಗಳನ್ನು ಉಳಿಸುವುದು ನಮ್ಮ ಗುರಿಯಾಗಿದೆ. ಇಸ್ರೇಲ್ ಒಂದು ದಶಕದಲ್ಲೇ ಅತಿದೊಡ್ಡ ಕಾಡ್ಗಿಚ್ಚು ದುರಂತವನ್ನು ಎದುರಿಸುತ್ತಿದೆ” ಎಂದಿದ್ದಾರೆ.
ಕಾಡ್ಗಿಚ್ಚು ಪೀಡಿತ ಪ್ರದೇಶಗಳಲ್ಲಿನ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅರಣ್ಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಬೆಂಕಿ ವ್ಯಾಪಿಸಿದಂತೆ ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೌಂಟ್ ಹರ್ಜಲ್ನಲ್ಲಿ ರಾಷ್ಟ್ರೀಯ ಸಮಾರಂಭ ಸೇರಿದಂತೆ ಗುರುವಾರ ಸ್ವಾತಂತ್ರ್ಯ ದಿನಾಚರಣೆಗೆ ಯೋಜಿಸಲಾಗಿದ್ದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಇದೇ ವೇಳೆ, ಇಸ್ರೇಲ್ ಸರ್ಕಾರವು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ. ಸ್ಥಳೀಯ ಸಿಬ್ಬಂದಿಗೆ ನೆರವಾಗಲು ಇಟಲಿ, ಕ್ರೊಯೇಷಿಯಾ ಮತ್ತು ಉತ್ತರ ಮ್ಯಾಸಿಡೋನಿಯಾದಿಂದ ಅಗ್ನಿಶಾಮಕ ವಿಮಾನಗಳನ್ನು ರವಾನಿಸಲಾಗಿದೆ. ಹೆಲಿಕಾಪ್ಟರ್ ಗಳ ಮೂಲಕ ಕಾಡ್ಗಿಚ್ಚಿನ ಮೇಲೆ ನೀರು ಸುರಿಯುವ ಕಾರ್ಯ ನಡೆಯುತ್ತಿವೆ.
2010ರಲ್ಲಿ ನಾಲ್ಕು ದಿನಗಳ ಕಾಲ ನಡೆದ ಮೌಂಟ್ ಕಾರ್ಮೆಲ್ ಕಾಡ್ಗಿಚ್ಚಿನಲ್ಲಿ 44 ಮಂದಿ ಮೃತಪಟ್ಟು, ಉತ್ತರ ಇಸ್ರೇಲ್ ನಲ್ಲಿ 12,000 ಎಕರೆಗೂ ಹೆಚ್ಚು ಪ್ರದೇಶ ನಾಶವಾಗಿತ್ತು. ಆದರೆ ಈಗ ಹಬ್ಬಿರುವ ಬೆಂಕಿಯು ಪ್ರಮಾಣ ಮತ್ತು ಪರಿಣಾಮದಲ್ಲಿ 2010ರ ದುರಂತವನ್ನು ಮೀರಿಸಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.