ಯಶಸ್ಸು ಎನ್ನುವುದೇ ಹಾಗೆ…ನೆಲದ ಮೇಲಿದ್ದವನನ್ನು ಉನ್ನತಿಯ ಉತ್ತುಂಗಕ್ಕೆ ಕರೆದೊಯ್ದು ನಿಲ್ಲಿಸಿದಾಗ ಅವರ ಬದುಕು ಪಡೆಯುವು ತಿರುವುಗಳು ಅದೆಷ್ಟೋ? ಇಂಥಾ ನೂರಾರು ತಿರುವುಗಳು ಕೆಲವರನ್ನು ಸಾಧನೆಯ ಉಚ್ಛ್ರಾಯ ಸ್ಥಿತಿಗೆ ಕರೆದೊಯ್ದರೆ ಮತ್ತೆ ಕೆಲವರನ್ನು ಕತ್ತಲ ಕರಾಳ ಲೋಕಕ್ಕೆ ನೂಕುವುದು ಉಂಟು. ಗೆಲುವಿನ ಕುದುರೆ ಏರಿ ಹೊರಟವರು ದಿಕ್ಕು ತಪ್ಪಿದ್ರೆ ಅವರ ಜೀವನವೇ ಬರ್ಬಾದ್ ಆಗಿರುವಂತಹ ಅದೆಷ್ಟೋ ಉದಾಹರಣೆಗಳು ಇಂದಿಗೂ ಜೀವಂತವಾಗಿವೆ. ಇಂಥದ್ದೇ ತಪ್ಪಿನ ಲೋಕದ ಹೆಬ್ಬಾಗಿಲಲ್ಲಿ ಬಂದು ನಿಂತುಬಿಟ್ರಾ? ಈ ಪ್ರತಿಭಾನ್ವಿತ ಗಾಯಕಿ ಎನ್ನುವುದು ಅನುಮಾನ ಹುಟ್ಟಿಸಿದೆ. ಹೌದು, ನಾವು ಹೇಳುತ್ತಿರುವುದು ದಕ್ಷಿಣ ಭಾರತದ ಅಪರೂಪದ ಗಾಯಕಿ ಮಂಗ್ಲಿ ಬಗ್ಗೆ.

ಸಾಮಾನ್ಯ ತಾಂಡಾದಿಂದ ಟಾಲಿವುಡ್ ವರೆಗೂ ಪಯಣ
ಹತ್ತಾರು ಅಡೆತಡೆ ದಾಟಿ ಬೆಳೆದು ನಿಂತ ಗಟ್ಟಿಗಿತ್ತಿ
ಇವತ್ತು, ತಮ್ಮ ಬರ್ತ್ ಡೇ ಪಾರ್ಟಿಯಲ್ಲಿ ಗಾಂಜಾ ಘಾಟು ಆವರಿಸಿರುವ ಆರೋಪ ಎದುರಿಸುತ್ತಿರುವ ಮಂಗ್ಲಿ ನಿಜಕ್ಕೂ ಅಪರೂಪದ ಸಾಧಕಿ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗೂಟಿಯ ತಾಂಡಾದ ಸಾಮಾನ್ಯ ಕುಟುಂಬದ ಕುಡಿ. ಇಬ್ಬರು ತಂಗಿಯರು, ಓರ್ವ ತಮ್ಮನೊಟ್ಟಿಗೆ ಬೆಳೆದ ಮಂಗ್ಲಿ, ಬಂಜಾರ ಸಮುದಾಯದಿಂದ ಉದಯಿಸಿದ ಅಪ್ರತಿಮ ಪ್ರತಿಭೆ. ಬಾಲ್ಯದಲ್ಲಿ ತಾಂಡಾದಲ್ಲಿ ಶಿಕ್ಷಣ ಪಡೆದ ಮಂಗ್ಲಿ ಬಳಿಕ, ಗ್ರಾಮೀಣಾಭಿವೃದ್ಧಿ ಇಲಾಖೆ ಶಿಷ್ಯ ವೇತನದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ತಿರುಪತಿಯಲ್ಲಿ ಕರ್ನಾಟಕ್ ಸಂಗೀತ ಡಿಪ್ಲೋಮಾ ಮಾಡಿದ ಗಾಯಕಿ, ಬದುಕನ್ನು ಬದಲಿಸಿದ್ದು, ಖಾಸಗಿ ಸುದ್ದಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ತೀನ್ ಮಾರ್ ಕಾರ್ಯಕ್ರಮ. ಇದರ ಮೂಲಕ ತೆಲುಗು ನಾಡಿನ ಮನೆ ಮಗಳಾಗಿದ್ದು ಇತಿಹಾಸ. ಮೂಲತಃ ಆಂಧ್ರದವರಾಗಿದ್ದರೂ ತೆಲಂಗಾಣ ತೆಲುಗನ್ನು ಕರಗತ ಮಾಡುಕೊಂಡ ಮಂಗ್ಲಿ, ನೂತನ ರಾಜ್ಯ ಸ್ಥಾಪನೆ ಬಳಿಕ ರೂಪಿಸಿದ ಗೀತೆ ಅವರನ್ನು ದೊಡ್ಡ ಎತ್ತರಕ್ಕೇರಿಸಿತ್ತು. ಜಾನಪದ ಸಂಗೀತ ಲೋಕದ ಅತಿ ದೊಡ್ಡ ತಾರೆಯಾಗಿ ಬೆಳೆದ ಮಂಗ್ಲಿ ತಮ್ಮ ಖಾಸಗಿ ಆಲ್ಬಂ ಗಳ ಮೂಲಕ ಜನ, ಮನ ಗೆದ್ದರು.

ಶೈಲಜಾ ರೆಡ್ಡಿ ಅಲ್ಲುಡು ಚಿತ್ರದ ಮೂಲಕ ಬದುಕು ಬದಲು
ಎಣ್ಣೆಗು ಹೆಣ್ಣಿಗು ಅಂತಾ ಕನ್ನಡಕ್ಕೂ ಎಂಟ್ರಿ ಕೊಟ್ಟ ಗಾಯಕಿ
ಕಿರುತೆರೆ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಮಂಗ್ಲಿ, ಪಾಲಿಗೆ 2018 ನಿಜಕ್ಕೂ ಅದೃಷ್ಟದ ಬಾಗಿಲನ್ನೇ ತೆರೆಯಿತು. ಗೋಪಿ ಸುಂದರ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಶೈಲಜಾ ರೆಡ್ಡಿ ಅಲ್ಲುಡು ಸಿನಿಮಾ ಮೂಲಕ ಮೊದಲ ಬಾರಿ ಸಿನಿ ಸಂಗೀತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮುಂದೆ ಮಂಗ್ಲಿ ಸಂಗೀತ ಲೋಕದ ದೃವತಾರೆಯಾಗಿ ಹೊಳೆದದ್ದು ಸುಳ್ಳಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ತಮ್ಮ ಮಾದಕ ಕಂಠದಿಂದಲೇ ಹೊಸ ಕಿಚ್ಚು ಹಚ್ಚಿದವರು ಮಂಗ್ಲಿ. 2021ರಲ್ಲಿ ಕನ್ನಡದ ರಾಬರ್ಟ್ ನ ತೆಲುಗು ಅವತರಿಣಿಕೆಯಲ್ಲಿ ಮಂಗ್ಲಿ ಹಾಡಿದ ಕಣ್ಣೇ ಅದಿರಿಂದಿ ಇತಿಹಾಸವನ್ನೇ ನಿರ್ಮಿಸಿತ್ತು. ಪ್ರೇಮ್ ನಿರ್ದೇಶದನ ಏಕ್ ಲವ್ಯ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಮಂಗ್ಲಿ, ಎಣ್ಣೆಗೆ ಹೆಣ್ಣಿಗು ಅಂತಾ ಹಾಡಿ ಕನ್ನಡ ಕಲಾ ರಸಿಕರ ದಿಲ್ ಗೆದ್ದಿದ್ದರು.

ಮಂಗ್ಲಿ ಪಾರ್ಟಿಯಲ್ಲಿ ಆವರಿಸಿತ್ತಾ ಗಾಂಜಾ ಘಾಟು
ತಮ್ಮ ವಿರುದ್ಧದ ಆರೋಪಗಳಿಗೆ ಏನೆಂದ್ರು ಮಂಗ್ಲಿ
ಮೊನ್ನೆ ಮಂಗ್ಲಿ, ಹೈದ್ರಾಬಾದ್ ಬಳಿಯ ರೆಸಾರ್ಟ್ ಒಂದರಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದರು. ಸಿನಿ ರಂಗದ ಪ್ರಮುಖರು, ಸ್ನೇಹಿತರು, ಕುಟುಂಬಸ್ತರು ಭಾಗಿಯಾಗಿದ್ದ ಕಾರ್ಯಕ್ರಮದ ಮೇಲೆ ಏಕಾಏಕಿ ತೆಲಂಗಾಣ ಖಾಕಿ ರೇಡ್ ಮಾಡಿತ್ತು. ಅಷ್ಟೇ ಅಲ್ಲಾ ಕಾರ್ಯಕ್ರಮದಲ್ಲಿ ಗಾಂಜಾ ಘಾಟು ತೇಲಿದೆ ಅಂತಾ ಕೇಸು ಜಡಿದಿದ್ದಾರೆ. ಪಾರ್ಟಿಯಲ್ಲಿ ಅಬ್ಬರದ ಸಂಗೀತ, ವಿದೇಶಿ ಮದ್ಯ ಬಳಸಿದ್ದನ್ನೂ ಪೊಲೀಸರು ಸಾಕ್ಷ್ಯ ಸಮೇತ ಬಹಿರಂಗ ಮಾಡಿದ್ದಾರೆ. ದಾಳಿ ವೇಳೆ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಳ್ತಿದ್ದಾಗ, ಖುದ್ದು ಮಂಗ್ಲಿ ಅದಕ್ಕೆ ಆಕ್ಷೇಪ ಪಡಿಸಿರುವ ವಿಡಿಯೋಗಳೂ ಹರಿದಾಡುತ್ತಿವೆ. ಆದರೆ, ಅಂಥದ್ದೇನು ಆಗೇಯಿಲ್ಲ, ಯಾರೋ ರೆಸಾರ್ಟ್ ಮ್ಯಾನೇಜರ್ ಗಾಂಜಾ ಸೇವಿಸಿದ್ದು ಸಾಬೀತಾಗಿದೆ. ಹಾಗಂತಾ ನಮಗೂ ಆತನಿಗೂ ಸಂಬಂಧವಿಲ್ಲ. ನನ್ನ ತಂದೆ ತಾಯಿ ಸಾಕ್ಷಿಯಾಗಿ ನಾವು ಕಾರ್ಯಕ್ರಮ ನಡೆಸಿದ್ದವು. ಹಾಗಂತಾ, ವಿದೇಶಿ ಮದ್ಯವನ್ನು ಆಯೋಜಿಸಲಾಗಿತ್ತು. ಇದಕ್ಕೆ ಅನುಮತಿ ಪಡೆಯಬೇಕು ಅಂತಾ ನನಗೆ ಗೊತ್ತಿರಲಿಲ್ಲ. ಯಾರದರು ಮಾರ್ಗದರ್ಶನ ಮಾಡುತ್ತಿದ್ದರೆ ಹೀಗಾಗುತ್ತಿರಲಿಲ್ಲ ಎಂದಿದ್ದಾರೆ ಮಂಗ್ಲಿ

ಅಸಲಿಗೆ ಮಂಗ್ಲಿಯ ಮೂಲ ಹೆಸರು ಸತ್ಯವತಿ ರಾಥೋಡ್. ಅಂದು ತಾಂಡಾದಿಂದ ಬಂದು ಇಂದು ಬಂಜಾರ್ ಹಿಲ್ಸ್ ನಲ್ಲಿ ನೆಲೆಸಿರುವ ಮಂಗ್ಲಿ ಸಾಗಿ ಬಂದ ಹಾದಿ ಎಂಥವರಿಗೂ ಆದರ್ಶ. ಆದರೆ, ನಿಜಕ್ಕೂ ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ವಸ್ತು ಓಡಾಡಿದೆಯಾ? ಹಾಗೊಮ್ಮೆ ಇಂತಹ ಮಾದಕ ಲೋಕದಲ್ಲಿ ಗಾಯಕಿ ತೇಲಿದ್ದೇ ಆದರೆ ಅದು ಆಘಾತಕಾರಿ. ಉಜ್ವಲ ಭವಿಷ್ಯ ಕಣ್ಣೆದುರಿದ್ದಾಗ, ಹಣದ ಮತ್ತಲ್ಲಿ ಮಾದಕ ಜಗತ್ತಿನೆಡೆ ವಾಲಿದರೆ ಪ್ರತಿಭಾನ್ವಿತ ಗಾಯಕಿಯ ವೃತ್ತಿ ಬದುಕಿನ ಯುಗಾಂತ್ಯವಾಗಿಬಿಡಹುದು. ನಿಜಕ್ಕೂ ಹಾಗಾಗದಿರಲಿ, ಮಂಗ್ಲಿ ತಮಗಂಟಿರೋ ಕಳಂಕದಿಂದ ಹೊರಬರ್ಲಿ ಅನ್ನೋದು ಅವರ ಅಭಿಮಾನಿಗಳ ಆಶಯ.