ಬೆಂಗಳೂರು: ಭ್ರಷ್ಟಾಚಾರ ತಡೆಗಟ್ಟಬೇಕಿದ್ದ ಲೋಕಾಯುಕ್ತ ವಿರುದ್ಧವೇ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.
ಪೊಲೀಸ್ ಇಲಾಖೆಯ ಮಾಜಿ ಹೆಡ್ ಕಾನ್ಸಟೇಬಲ್ ಜೊತೆ ಶಾಮಿಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಎಸ್ಪಿ ಶ್ರೀನಾಥ್ ಜೋಶಿಯನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಬಿಡಿಎ, ಅಬಕಾರಿ ಇಲಾಖೆ ಸೇರಿದಂತೆ ಹಲವರಿಗೆ ಕರೆ ಮಾಡಿ ನಿಮ್ಮ ಇಲಾಖೆಯ ಮೇಲೆ ದಾಳಿ ಮಾಡುವುದಾಗಿ ಕರೆ ಮಾಡಿ, ಅಕ್ರಮ ಆಸ್ತಿ ಗಳಿಕೆ ಮಾಡಿದ್ದೀರೆಂದು ಕರೆ ಮಾಡಿ ಹೆದರಿಸುತ್ತಿದ್ದ ಮಾಜಿ ಹೆಡ್ ಕಾನ್ಸ್ ಟೇಬಲ್ ನಿಂಗಪ್ಪನ ವಿರುದ್ಧ ಹಲವು ದೂರು ಕೇಳಿ ಬಂದಿದ್ದವು. ಆನಂತರ ನಿಂಗಪ್ಪನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಲೋಕಯುಕ್ತ ಪೊಲಿಸರ ಜೊತೆ ನಂಟು ಇರುವ ಶಂಕೆ ವ್ಯಕ್ತವಾಗಿತ್ತು. ನಿಂಗಪ್ಪನ ಮೊಬೈಲ್ ಪರಿಶೀಲನೆ ವೇಳೆ ಹಲವರ ಕಾಂಟಾಕ್ಟ್ ಇರುವುದು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೆಲ ಪೋಲಿಸರು ನಿಂಗಪ್ಪನ ಜೊತೆ ಲಿಂಕ್ ಇರುವುದು ಪತ್ತೆಯಾಗಿತ್ತು. ಕೆಲವರು ಸುಲಿಗೆ ಮಾಡಿದ ಹಣದಲ್ಲಿ ಪಾಲು ಪಡೆಯುತ್ತಿದ್ದರು ಎನ್ನಲಾಗಿದೆ. ಸಾಕ್ಷಿಗಳ ಆಧಾರದ ಮೇಲೆ ಯಾರ್ಯರ ಬಳಿ ಸುಲಿಗೆ ಮಾಡಿದ್ರು? ಆರೋಪಿಯ ಜೊತೆಗಿದ್ದ ಪೊಲೀಸರು ಯಾರು? ಯಾರ್ಯರ ಬಳಿ ಹಣ ಸಂಗ್ರಹ ಮಾಡಿದ್ರು? ಎಂಬ ಕುರಿತು ಈಗಾಗಲೇ ತನಿಖೆ ನಡೆಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗಿದೆ.
ನಿಂಗಪ್ಪ ಪೋಲಿಸ್ ಇಲಾಖೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿದ್ದು, ಕೆಲವು ವರ್ಷಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದ. ಲೋಕಯುಕ್ತ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಸುಲಿಗೆ ಮಾಡುವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದ. ಈತನ ವಿರುದ್ಧ ಬೆಂಗಳೂರು ಸೇರಿದಂತೆ ಹಲವು ಕಡೆ ದೂರು ದಾಖಲಾಗಿದ್ದವು. ಜೈಲು ಸೇರಿ ಹೊರ ಬಂದ ನಂತರ ಕೂಡ ಇದೇ ಚಾಳಿ ಮುಂದುವರೆಸಿದ್ದ ಎನ್ನಲಾಗಿದೆ.