ರಾಜ್ಯ ರಾಜಕೀಯದಲ್ಲಿ ಮಹತ್ತರ ಪಲ್ಲಟಕ್ಕೆ ಮುಹೂರ್ತ ನಿಗದಿಯಾದಂತಾಗಿದೆ. ಸಿದ್ದರಾಮಯ್ಯ ಸಾರಥ್ಯದ ಸರ್ಕಾರಕ್ಕೆ 2 ವರ್ಷ ತುಂಬುತ್ತಿದ್ದಂತೆ, ಹೈಕಮಾಂಡ್ ಕೂಡಾ ಅಲರ್ಟ್ ಆಗಿದೆ. ಮೊನ್ನೆಯ ಆರ್ ಸಿಬಿ ದುರಂತದಿಂದ ಅಂಟಿರೋ ಕಪ್ಪು ಚುಕ್ಕೆಯನ್ನು ತೊಲಗಿಸಲು ಪ್ರಬಲ ತಂಡ ಕಟ್ಟೋ ಇರಾದೆಯಲ್ಲಿದೆ. ಹೀಗಾಗಿ ಸಂಪುಟ ಪುನಾರಚನೆಗೆ ಸಮ್ಮತಿ ನೀಡಿದೆ ಎನ್ನಲಾಗುತ್ತಿದೆ.
ವಿಸ್ತರಣೆ ಅಲ್ಲಾ, ಪುನಾರಚನೆಗೇ ಗ್ರೀನ್ ಸಿಗ್ನಲ್
ಹಿರಿಯರಿಗೆ ಕೊಕ್, ಹೊಸ ಮುಖಗಳಿಗೆ ಮಣೆ
ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಅನ್ನೋದು ಕಾಂಗ್ರೆಸ್ ಶಾಸಕರು ಕೇಳುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಮೇಲ್ನೋಟಕ್ಕೆ ವಿಸ್ತರಣೆ ಅಂತಾ ಆದ್ರೆ ನಾಗೇಂದ್ರರಿಂದ ತೆರವಾಗಿರುವ ಒಂದು ಕುರ್ಚಿ ಬಿಟ್ಟರೆ ಹೆಚ್ಚಿನ ಅವಕಾಶವಿಲ್ಲ. ಆದರೆ, ಪಕ್ಷದ ವರ್ಚಸ್ಸನ್ನು ವೃದ್ಧಿಸುವ ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ಬಿಬಿಎಂಪಿ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ದುಡಿಯುವ ಹೊಸಬರಿಗೆ ಅವಕಾಶ ನೀಡುವ ಹುಮ್ಮಸ್ಸಿನಲ್ಲಿ ಹೈಕಮಾಂಡ್ ಇದೆ. ಹೀಗಾಗಿ ಸಂಪುಟದಲ್ಲಿರುವ 3ರಿಂದ 5 ಮಂದಿ ಹಿರಿಯರಿಗೆ ಗೇಟ್ ಪಾಸ್ ನೀಡಿ, ಹೊಸಬರನ್ನು ಅಖಾಡಕ್ಕಿಳಿಸೋ ಚಿಂತನೆ ನಡೆದಿದೆ.
ಯಾರ ಹೆಗಲಿಗೆ ಗೃಹ ಇಲಾಖೆ ಹೊಣೆಗಾರಿಕೆ?
ಯಾರಾಗ್ತಾರೆ ಇನ್… ಯಾರಾಗ್ತಾರೆ ಔಟ್?
ಇನ್ನು ಸಂಪುಟ ಪುನಾರಚನೆಯೇ ಸೂಕ್ತ ಅನ್ನೋ ಅಂತಿಮ ನಿರ್ಧಾರಕ್ಕೆ ರಾಹುಲ್ ಕೂಡಾ ಬಂದಿದ್ದಾರೆ ಎನ್ನಲಾಗ್ತಿದೆ. ಪಕ್ಷದಲ್ಲಿ ಹಲವು ವರ್ಷಗಳಿಂದ ಸಚಿವಗಿರಿ ಅನುಭವಿಸಿದವರನ್ನು ಪಕ್ಷದಲ್ಲಿ ಅನ್ಯ ಹೊಣೆ ನೀಡುವ ಪ್ಲ್ಯಾನ್ ಮಾಡಲಾಗ್ತಿದೆ. ಈ ನಿಟ್ಟಿನಲ್ಲಿ, 10ಕ್ಕೂ ಹೆಚ್ಚು ಜನರನ್ನು ಸಂಪುಟದಿಂದ ಕೈ ಬಿಡುವ ಸಿದ್ಧತೆ ನಡೆದಿದೆ.
ಈ ಪೈಕಿ ಹಿರಿಯ ಸಚಿವ ಕೆ ಹೆಚ್ ಮುನಿಯಪ್ಪ, ಡಾ ಜಿ ಪರಮೇಶ್ವರ್, ಕೆ ವೆಂಕಟೇಶ್, ಕೆಎನ್ ರಾಜಣ್ಣ, ಹೆಚ್ ಕೆ ಪಾಟೀಲ್, ಕೆಜೆ ಜಾರ್ಜ್, ರಾಮಲಿಂಗಾ ರೆಡ್ಡಿ, ಆರ್ ಬಿ ತಿಮ್ಮಾಪುರ, ಹೆಚ್ ಸಿ ಮಹದೇವಪ್ಪ, ಎಸ್ ಎಸ್ ಮಲ್ಲಿಕಾರ್ಜುನ್, ದಿನೇಶ್ ಗುಂಡೂರಾವ್ ರನ್ನು ಅನ್ಯ ಹೊಣೆ ನೀಡಿ, ಹೊಸಬರಿಗೆ ಸ್ಥಾನ ಕಲ್ಪಿಸುವ ಲೆಕ್ಕಾಚಾರ ನಡೆದಿದೆ.
ನಾಗೇಂದ್ರಗೆ ಮತ್ತೆ ಒಲಿಯಲಿದೆಯಾ ಜಾಕ್ ಪಾಟ್?
ಯಾವೆಲ್ಲಾ ಮುಖಂಡರ ಮೇಲಿದೆ ಹೈಕಮಾಂಡ್ ಒಲವು?
ಸಂಪುಟ ವಿಸ್ತರಣೆಯಾದರೆ, ವಾಲ್ಮೀಕಿ ಹಗರಣದಲ್ಲಿ ರಾಜೀನಾಮೆ ನೀಡಿದ್ದ ನಾಗೇಂದ್ರ ಮರಳಿ ಸಂಪುಟ ಸೇರೋದು ನಿಶ್ಚಿತ. ಇದರೊಟ್ಟಿಗೆ ತಂದೆಯಿಂದ ತೆರವಾದ ಸ್ಥಾನವನ್ನು ಪುತ್ರಿ ರೂಪಾ ಶಶಿಧರ್ ಅಲಂಕರಿಸುವ ಸಾಧ್ಯತೆಗಳಿವೆ. ಉಳಿದಂತೆ ಗೃಹ ಖಾತೆ ನಿಭಾಯಿಸೋ ಛಾತಿ ಇರೋ ನಾಯಕ ಅಂತಲೇ ಬಿಂಬಿತವಾಗ್ತಿರೋ ಬಿಕೆ ಹರಿಪ್ರಸಾದ್ ಗೆ ಅದೃಷ್ಟ ಖುಲಾಯಿಸಬಹುದು.
ಉಳಿದಂತೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದಿದ್ದ ಹಿರಿಯ ಮುಖಂಡ ಲಕ್ಷ್ಮಣ್ ಸವದಿಗೆ ಮಂತ್ರಿಗಿರಿ ನೀಡಲು ಹೈಕಮಾಂಡ್ ಒಲವು ತೋರಿದೆ. ಹಾಗೇ ಜೆಡಿಎಸ್ ನಿಂದ ಬಂದಿರೋ ಶಿವಲಿಂಗೇಗೌಡ, ಹೊಸದುರ್ಗದ ಬಿಜಿ ಗೋವಿಂದಪ್ಪ, ಭದ್ರಾವತಿಯ ಬಿಕೆ ಸಂಗಮೇಶ್, ವಿಜಯನಗರದ ಕೃಷ್ಣಪ್ಪ, ಸಿಪಿ ಯೋಗೇಶ್ವರ್ ಮುಂಚೂಣಿಯಲ್ಲಿದ್ದಾರೆ. ಆದ್ರೆ, ಅಂತಿಮವಾಗಿ ಯಾರಿಗೆಲ್ಲಾ ಅಂತಿಮ ಪಟ್ಟಿಯಲ್ಲಿ ಸ್ಥಾನ ಸಿಗುತ್ತೆ ಅನ್ನೋದು ಇನ್ನೂ ನಿಗೂಢವಾಗಿದೆ.