ಬೆಂಗಳೂರು: ಅಮಾನತ್ತಾಗಿರುವ ದಯಾನಂದ್ ಅವರಿಗೆ ಜಿಲ್ಲಾಧಿಕಾರಿ ತನಿಖೆಯ ಬಿಸಿ ಎದುರಾಗುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಜಿಲ್ಲಾಧಿಕಾರಿ ಅವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಗೆ ನೋಟಿಸ್ ನೀಡಿದ್ದಾರೆ. ಆದರೆ, ನೋಟಿಸ್ ನೀಡುವುದಕ್ಕೂ ಮುಂಚೆಯೇ ದಯಾನಂದ್ ಅವರು ಅಮಾನತ್ತು ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಾಳೆಯ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಜಿಲ್ಲಾಧಿಕಾರಿ ಅವರು ನಗರ ಪೊಲೀಸ್ ಆಯುಕ್ತರ ಹುದ್ದೆಯಲ್ಲಿರುವವರಿಗೆ ನೋಟಿಸ್ ನೀಡಿದ್ದಾರೆ. ನಾಳೆ ನಗರ ಪೊಲೀಸ್ ಆಯುಕ್ತರು ಅಥವಾ ಅವರು ಕಳಿಸಿದ ಪ್ರತಿನಿಧಿ ವಿಚಾರಣೆಗೆ ಬಂದರೂ ಘಟನೆಯ ಬಗ್ಗೆ ಪೂರಕ ಮಾಹಿತಿ ನೀಡದೇ ಇದ್ದರೆ, ಖುದ್ದು ದಯಾನಂದ್ ಗೆ ತಿಳುವಳಿಕೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಾಲ್ತುಳಿತಕ್ಕೆ ಪ್ರತ್ಯಕ್ಷ ದರ್ಶಿಯಾಗಿದ್ದ ದಯಾನಂದ್ ಹೇಳಿಕೆಯೇ ಹೆಚ್ಚು ತೂಕ ಇರುವುದರಿಂದ ದಯಾನಂದ್ ಗೆ ಪ್ರತ್ಯೇಕ ನೋಟಿಸ್ ನೀಡುವ ಸಾಧ್ಯತೆ ಇದೆ.