ರಣರಂಗದಲ್ಲೀಗ ಪ್ರತೀಕಾರದ ಜ್ವಾಲಾಮುಖಿ ಸ್ಫೋಟಿಸಿದೆ. ಇಸ್ರೇಲ್ ವಿರುದ್ಧ ಜಿದ್ದಿಗೆ ಬಿದ್ದವರಂತೆ ದಾಳಿಗೆ ಮುಂದಾಗಿರುವ ಇರಾನ್, ನಿರಂತರ ಕ್ಷಿಪಣಿ ಮಳೆಗೈದಿದೆ. ಇಸ್ರೇಲ್-ಇರಾನ್ ನಡುವಿನ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲಾ ಹಿಂದೆಂದಿಗಿಂತಲೂ ರಣಘೋರ ಪರಿಸ್ಥಿತಿಯನ್ನು ತಲುಪಿದೆ. ನಿನ್ನೆ ರಾತ್ರಿ ಜೆರುಸಲೇಮ್ ಸೇರಿದಂತೆ ಟೆಲ್ ಅವೀವ್ ನಲ್ಲಿ ನಿರಂತರವಾಗಿ ಸೈರನ್ ಗಳು ಮೊಳಗಿವೆ. ಪ್ರತೀಕಾರದ ದಾಳಿ ಆರಂಭಿಸಿದ್ದ ಇರಾನ್ ನ ಕ್ಷಿಪಣಿ ದಾಳಿಯಿಂದ ಪಾರಾಗಲು, ಇಸ್ರೇಲಿಗಳಿಗೆ ಬಂಕರ್ ಸೇರುವಂತೆ ಕಟ್ಟಪ್ಪಣೆ ಮಾಡಲಾಗಿತ್ತು.
ಇಸ್ರೇಲ್ ಮೇಲೆ ಕ್ಲಸ್ಟರ್ ಬಾಂಬ್ ಗಳ ಸುರಿಮಳೆ
ಇರಾನ್ ನ ಅಣ್ವಸ್ತ್ರ ಸ್ಥಾವರಗಳನ್ನು ಗುರಿಯಾಗಿಸಿ ಇಸ್ರೇಲ್ ನಿರಂತರ ದಾಳಿ ನಡೆಸಿತ್ತು. ಇದಕ್ಕುತ್ತರವಾಗಿ ನಿನ್ನೆ ಇಸ್ರೇಲ್ ಮೇಲೆ ಪ್ರಳಯಾಂತಕ ದಾಳಿ ನಡೆಸಿದೆ. ಅದರಲ್ಲೂ ಇದೇ ಮೊದಲ ಬಾರಿ, ಇಸ್ರೇಲ್ ಮೇಲೆ ಇರಾನ್, ಕ್ಲಸ್ಟರ್ ಬಾಂಬ್ ದಾಳಿ ನಡೆಸಿದೆ. ಅಷ್ಟಕ್ಕೂ ಈ ಕ್ಲಷ್ಟರ್ ಬಾಂಬ್ ಎಂದರೆ, ಒಂದು ಗುಚ್ಛ ಸಮೂಹದಲ್ಲಿ ಬಾಂಬ್ ದಾಳಿ ಅಂತಾ ಅರ್ಥ. ಸಾಮೂಹಿಕವಾಗಿ ಸಿಡಿಯೋ ಈ ಬಾಂಬ್ ಗಳು ನಿರ್ಧಿಷ್ಟ ಗುರಿಯನ್ನು ಹೊಂದಿರದಿದ್ದರೂ ಬಾನಿಗೆ ಹಾರುತ್ತಿದ್ದಂತೆ ಪ್ರತ್ಯೇಕಗೊಂಡು ನಾನಾ ಗುರಿಗಳನ್ನು ಛಿದ್ರವಾಗಿಸುವ ಸಾಮರ್ಥ್ಯ ಹೊಂದಿವೆ. ಇನ್ನು ನಿನ್ನೆಯ ದಾಳಿಯಲ್ಲಿ ಇಸ್ರೇಲ್ ನ ಟೆಕ್ ಹಬ್ ಆಗಿರುವ ಬೀರ್ ಶೇವಾದ ಮೇಲೂ ಕ್ಲಸ್ಟರ್ ಬಾಂಬ್ ಗಳು ಅಪ್ಪಳಿಸಿವೆ. ಪರಿಣಾಮ ಮೈಕ್ರೋಸಾಫ್ಟ್ ಕಂಪನಿ ಕಟ್ಟಡದ ಅಂಗಳದಲ್ಲೇ ಬಾಂಬ್ ಸ್ಫೋಟಿಸಿದೆ. ಇದು ಅಲ್ಲಿನ ಸಿಬ್ಬಂದಿಯನ್ನು ಭಯಭೀತಗೊಳಿಸಿದೆ.
ಭಾರತೀಯರಿಗಾಗಿ ತೆರೆದ ಇರಾನ್ ವಾಯುಪ್ರದೇಶ
ರಣಭೀಕರ ಕದನದಿಂದ ಇರಾನ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದಾರೆ. ನಿನ್ನೆ ಮಧ್ಯರಾತ್ರಿ ಭಾರತೀಯರನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಬಂದಿಳಿದಿದೆ. ಆದ್ರೆ, ಇರಾನ್ ಯುದ್ಧದ ಕಾರ್ಮೋಡ ಹಿನ್ನೆಲೆಯಲ್ಲಿ ತನ್ನ ವಾಯುವಲಯವನ್ನು ಬಂದ್ ಮಾಡಿದೆ. ಆದ್ರೆ, ತನ್ನ ಸ್ನೇಹದ ಧ್ಯೋತಕವಾಗಿ ಭಾರತದ ಪಾಲಿಗೆ ಮಾತ್ರ ಈ ವಾಯುವಲಯವನ್ನು ಇರಾನ್ ಮುಕ್ತಗೊಳಿಸಿದೆ. ಹೀಗಾಗಿಯೇ ಭಾರತೀಯರನ್ನು ಹೊತ್ತ ಇನ್ನಷ್ಟು ವಿಮಾನಗಳು ಸಜ್ಜಾಗಿದ್ದು, ಇಂದು ಇಲ್ಲಾ, ನಾಳೆ ಭಾರತಕ್ಕೆ ವಾಪಸ್ ಆಗಲಿದೆ. ಇರಾನ್ ನಲ್ಲಿ ಸಿಲುಕಿರುವ ಭಾರತೀಯರ ವಾಪಸಾತಿಗೆ ಆಪರೇಷನ್ ಸಿಂಧು ಹೆಸರಲ್ಲಿನಲ್ಲಿ ಕಾರ್ಯಚರಣೆ ಕೈಗೊಳ್ಳಲಾಗದಿದೆ. ಈ ಆಪರೇಷನ್ ಸಿಂದು ವಿಮಾನಗಳ ಹಾರಾಟಕ್ಕೆ ಇರಾನ್ ವಾಯುಪ್ರದೇಶವನ್ನು ಮುಕ್ತಗೊಳಿಸಲಾಗಿದೆ. ಈ ನಡುವೆ, ಇರಾನ್ ಗೆ ಅಂತಿಮ ಸಂದೇಶ ರವಾನಿಸಿದ್ದ ಅಮೆರಿಕ, ಇನ್ನೆರೆಡು ವಾರ ಕಾದು ನೋಡುವ ನಿರ್ಧಾರ ಕೈಗೊಂಡಿದೆ. ಆ ಹೊತ್ತಿಗೆ ಪರಿಸ್ಥಿತಿ ಬದಲಾಗದಿದ್ರೆ, ನೇರ ಸಮರಾಂಗಣಕ್ಕೆ ಧುಮುಕುವ ಸುಳಿವನ್ನು ಟ್ರಂಪ್ ಆಡಳಿತ ನೀಡಿದೆ. ಒಟ್ನಲ್ಲಿ, ಇರಾನ್-ಇಸ್ರೇಲ್ ಕದನ ಇದೀಗ ಮತ್ತೊಂದು ಮಜಲಿಗೆ ಹೊರಳಿದ್ದು, ಘನಘೋರ ಹಂತಕ್ಕೆ ಬಂದು ನಿಂತಿದೆ.