ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿಯ ನಿಯೋಗ ರಾಜ್ಯಪಾಲರಿಗೆ ಮನವಿ ಅರ್ಪಿಸಿದ್ದು, ಈ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿದ್ದಾರೆ.
ಶಾಸಕರ ಅಮಾನತು ಸಂವಿಧಾನ ಬಾಹಿರ ಎಂಬುವುದರ ಬಗ್ಗೆ ಗವರ್ನರ್ ಗಮನ ಸೆಳೆದಿದ್ದೇವೆ. ಈ ಕುರಿತು ಸರ್ಕಾರಕ್ಕೂ ಪತ್ರ ಬರೆಯುತ್ತೇನೆ. ಸ್ಪೀಕರ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗುವುದು ಎಂದಿದ್ದಾರೆ.
ರೈಲ್ವೆ ನೇಮಕಾತಿ ಪರೀಕ್ಷೆಯ ಸಂದರ್ಭದಲ್ಲಿ ತಾಳಿ ಮತ್ತು ಜನಿವಾರದ ಉಲ್ಲೇಖ ಮಾಡಿದ್ದಾರಂತೆ. ನಾನು ಈಗ ಕೇಂದ್ರ ಸಚಿವರ ಜೊತೆ ಮಾತನಾಡಿದ್ದನೆ. ರೈಲ್ವೆ ಸಚಿವರು ಅಂತಹ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾಗಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ ಎಂದಿದ್ದಾರೆ.
ರಾಜಣ್ಣ, ಸಿಡಿ ಬಂದಿದೆ ಎಂದು ಅಂಗಲಾಚಿದ್ದಾರೆ. ಶೇ. 4ರಷ್ಟು ಧರ್ಮಾಧಾರಿತ ಮೀಸಲಾತಿ ನೀಡಿದ್ದು, ಸಂವಿಧಾನ ವಿರುದ್ಧ. ಈ ಎರಡು ವಿಚಾರ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಆದರೆ, ಸ್ಪೀಕರ್ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದಾರೆ.
ಹಾಗಾದರೆ ನಾವು ಮಾತನಾಡಿರುವುದೇ ತಪ್ಪಾ? ಸ್ಪೀಕರ್ ಗೂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಈ ಹಿಂದೆ ಸದನದಲ್ಲಿ ಬಟ್ಟೆ ಹರಿದು ಹಾಕಿದ್ದರು. ಬಾಗಿಲು ಒದ್ದಿದ್ದರು. ಆಗ ನಾವು ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಂಡಿದ್ದೇವೆ. ಸರ್ಕಾರಕ್ಕೆ ಆಡಳಿತ ಪಕ್ಷದಷ್ಟೇ ವಿಪಕ್ಷವೂ ಮುಖ್ಯ. ಈ ವಿಷಯವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಸ್ಪೀಕರ್ ಹಾಗೂ ಸಚಿವರ ಜೊತೆ ಮಾತನಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. 18 ಶಾಸಕರಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.