ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ನಡೆಸಿದ್ದ ಭೀಕರ ದಾಳಿಗೆ ಶುಕ್ರವಾರ 6 ವರ್ಷ ಪೂರ್ಣಗೊಂಡಿದೆ. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ ಎಂದು ದಾಖಲಾಗಿದ್ದು, 40 ವೀರ ಯೋಧರನ್ನು ಕಳೆದುಕೊಂಡ ಫೆ.14 ಅನ್ನು ಭಾರತವು ಕರಾಳ ದಿನವಾಗಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, “2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನಗಳು. ಅವರ ತ್ಯಾಗ ಮತ್ತು ದೇಶಕ್ಕಾಗಿನ ಬದ್ಧತೆಯನ್ನು ಮುಂದಿನ ತಲೆಮಾರುಗಳು ಎಂದಿಗೂ ಮರೆಯಲ್ಲ” ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾರತದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವಲ್ಲಿ ಎನ್ಡಿಎ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. “2019ರ ಈ ದಿನ ಹೇಡಿಗಳು ಪುಲ್ವಾಮಾದಲ್ಲಿ ನಡೆಸಿದ ಹೇಯ ಕೃತ್ಯಕ್ಕೆ ಬಲಿಯಾದ ಹುತಾತ್ಮರಿಗೆ ನಾನು ಇಡೀ ದೇಶದ ವತಿಯಿಂದ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಭಯೋತ್ಪಾದನೆ ಎನ್ನುವುದು ಇಡೀ ಮಾನವತೆಯ ಶತ್ರು. ಅದರ ವಿರುದ್ಧ ಇಡೀ ಜಗತ್ತೇ ಒಂದಾಗಿದೆ. ಸರ್ಜಿಕಲ್ ದಾಳಿ ಮೂಲಕವಾಗಲೀ, ವೈಮಾನಿಕ ದಾಳಿಯ ಮೂಲಕವಾಗಲೀ ಭಯೋತ್ಪಾದಕರನ್ನು ಸಂಹರಿಸಲು ಮೋದಿ ಸರ್ಕಾರ ಬದ್ಧವಾಗಿದೆ. ಉಗ್ರವಾದದ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತಿದೆ,” ಎಂದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಟ್ವೀಟ್ ಮಾಡುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇವರಷ್ಟೇ ಅಲ್ಲ, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಸೇರಿದಂತೆ ಅನೇಕರು ಹುತಾತ್ಮರನ್ನು ಸ್ಮರಿಸಿದ್ದಾರೆ. ಭಾರತಮಾತೆಗಾಗಿ ನಮ್ಮ ಯೋಧರು ಮಾಡಿರುವ ತ್ಯಾಗವನ್ನು ಎಂದಿಗೂ ಮರೆಯಲಾಗದು ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಕೋರನು ಭಾರೀ ಪ್ರಮಾಣದ ಸ್ಫೋಟಕ ತುಂಬಿದ್ದ ಟ್ರಕ್ವೊಂದನ್ನು ಸಿಆರ್ಪಿಎಫ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಪರಿಣಾಮವೆಂಬಂತೆ ಭಾರೀ ಸ್ಫೋಟ ಸಂಭವಿಸಿ 40 ಮಂದಿ ಯೋಧರು ಸ್ಥಳದಲ್ಲೇ ಅಸುನೀಗಿದ್ದರು. ಇದಾದ ಬೆನ್ನಲ್ಲೇ ಭಾರತವು ಪಾಕ್ ಆಕ್ರಮಿತ ಕಾಶ್ಮೀರದೊಳಕ್ಕೆ ನುಗ್ಗಿ ಬಾಲಕೋಟ್ನಲ್ಲಿ ವೈಮಾನಿಕ ದಾಳಿಯನ್ನು ನಡೆಸಿ, ಹಲವು ಉಗ್ರರನ್ನು ಸಂಹರಿಸಿತ್ತು.