ನವದೆಹಲಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ವಜೀರಿಸ್ತಾನದಲ್ಲಿ ಜೂನ್ 28ರ ಶನಿವಾರ ನಡೆದ ಆತ್ಮಾಹುತಿ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಬಡಬಡಾಯಿಸಿದೆ. ಆದರೆ, ಪಾಕ್ ಸೇನೆಯ ಈ ಆರೋಪವನ್ನು ಭಾರತವು ತೀವ್ರವಾಗಿ ಖಂಡಿಸಿದೆ. ಈ ಆರೋಪಗಳು “ಆಧಾರರಹಿತ ಮತ್ತು ಅಸಂಬದ್ಧ” ಎಂದು ಭಾರತ ಹೇಳಿದೆ.
ಶನಿವಾರ ವಜೀರಿಸ್ತಾನದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 13 ಪಾಕ್ ಸೈನಿಕರು ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆಯು ಈ ದಾಳಿಯ ನಂತರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಈ ಘಟನೆಯಲ್ಲಿ ಭಾರತದ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿತ್ತು.
ಭಾರತದ ತಿರುಗೇಟು:
ಪಾಕಿಸ್ತಾನ ಸೇನೆಯ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, “ಜೂನ್ 28ರಂದು ವಜೀರಿಸ್ತಾನದಲ್ಲಿ ನಡೆದ ದಾಳಿಗೆ ಭಾರತವನ್ನು ದೂಷಿಸಲು ಪ್ರಯತ್ನಿಸಿದ ಪಾಕಿಸ್ತಾನ ಸೇನೆಯ ಅಧಿಕೃತ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಈ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತೇವೆ” ಎಂದು ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ. ಪಾಕಿಸ್ತಾನದ ಆಂತರಿಕ ವಿಷಯಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಪಾಕಿಸ್ತಾನವು ತನ್ನ ಗಡಿಯೊಳಗಿನ ಭಯೋತ್ಪಾದನೆಯನ್ನು ಎದುರಿಸಲು ಗಮನ ಹರಿಸಬೇಕೇ ಹೊರತು, ಬೇರೆಯವರ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ಭಾರತ ತಿರುಗೇಟು ನೀಡಿದೆ. ಜೊತೆಗೆ ಈ ರೀತಿಯ ಆಧಾರರಹಿತ ಆರೋಪಗಳು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಎಂದು ಭಾರತ ಎಚ್ಚರಿಸಿದೆ.
ಲಭ್ಯವಿರುವ ವರದಿಗಳ ಪ್ರಕಾರ, ಈ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ನ ಒಂದು ಬಣವಾದ ‘ಹಫೀಜ್ ಗುಲ್ ಬಹದ್ದೂರ್’ ಗುಂಪು ಹೊತ್ತುಕೊಂಡಿದೆ. ಆದಾಗ್ಯೂ, ಪಾಕಿಸ್ತಾನದ ಮಿಲಿಟರಿ ವಿದೇಶಿ ಕೈವಾಡದ ಬಗ್ಗೆ ಸುಳಿವು ನೀಡುವ ಮೂಲಕ ಭಾರತವನ್ನು ದೂಷಿಸಲು ಯತ್ನಿಸುತ್ತಿರುವುದು ಆ ದೇಶದ ಬಣ್ಣವನ್ನು ಬಯಲಾಗಿಸಿದೆ.