ಇಸ್ಲಾಮಾಬಾದ್: ಒಂದೆಡೆ ಪಾಕಿಸ್ತಾನದ ಸರ್ಕಾರ, ಅಲ್ಲಿನ ಸೇನೆ ಮತ್ತು ಮಾಧ್ಯಮಗಳು ಭಾರತದ ಆಪರೇಷನ್ ಸಿಂದೂರದ(Operation Sindoor) ಬಗ್ಗೆ ಸುಳ್ಳೇ ಸುಳ್ಳು ಸುದ್ದಿಗಳು, ಮಾಹಿತಿಯನ್ನು ಹಬ್ಬಿಸುತ್ತಿದ್ದರೆ, ಮತ್ತೊಂದೆಡೆ ಆ ಸುಳ್ಳುಗಳನ್ನು ಸ್ವತಃ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಬಯಲು ಮಾಡುತ್ತಾ, ತಮ್ಮದೇ ಸರ್ಕಾರವನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಅಲ್ಲದೇ, ಅತ್ಯಂತ ನಿಖರತೆಯಿಂದ ಉಗ್ರರ 9 ನೆಲೆಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಭಾರತವನ್ನು ಶ್ಲಾಘಿಸಿದ್ದಾರೆ.
ಭಾರತವು ತನ್ನ ಎಲ್ಲಾ ಗುರಿಗಳನ್ನು ಯಶಸ್ವಿಯಾಗಿ ತಲುಪಿದೆ. ಆದರೆ, ಭಾರತ ಉಡಾವಣೆ ಮಾಡಿದ 24 ಕ್ಷಿಪಣಿಗಳಲ್ಲಿ ಒಂದೇ ಒಂದನ್ನೂ ತಡೆಯಲು ಪಾಕಿಸ್ತಾನಕ್ಕೆ ಆಗಲಿಲ್ಲ ಎಂದು ಆ ವ್ಯಕ್ತಿಯು ಹೇಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಮಂಗಳವಾರ ರಾತ್ರಿ ಭಾರತವು ಅತ್ಯಂತ ಸ್ಪಷ್ಟ ಮತ್ತು ನಿಖರವಾಗಿ ಕ್ಷಿಪಣಿಗಳನ್ನು ಉಡಾಯಿಸಿತು. ಆ ಎಲ್ಲ ಕ್ಷಿಪಣಿಗಳೂ ತಮ್ಮ ಗುರಿಗಳನ್ನು ಸರಿಯಾಗಿ ತಲುಪಿದವು. ಇದೊಂದು ಆಶ್ಚರ್ಯಕರ ಸಂಗತಿ. ಅದೇನೇ ಆದರೂ ಭಾರತ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲವಾಯಿತು. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಗೆ ಭಾರತದ ಒಂದೇ ಒಂದು ಕ್ಷಿಪಣಿಯನ್ನೂ ತಡೆದು ನಿಲ್ಲಿಸಲು ಸಾಧ್ಯವಾಗಲಿಲ್ಲ. ನಿಜ ಹೇಳಬೇಕೆಂದರೆ ನಾವು ಸಂಪೂರ್ಣ ವಿಫಲರಾಗಿದ್ದೇವೆ. ಭಾರತವು ನಮ್ಮ ನೆಲಗ್ಗೆ ನುಗ್ಗಿ ಹೊಡೆದಿದೆ(ಇಂಡಿಯಾ ನೇ ಘುಸ್ ಕೇ ಮಾರಾ). ಇದು ವಾಸ್ತವ. ನಾನು ಭಾರತವನ್ನು ಹೊಗಳುತ್ತಿದ್ದೇನೆ ಎಂದು ದೂಷಿಸಬೇಡಿ. ನಿಮಗೆ ಗೊತ್ತಿರಬಹುದು- ಇರಾನ್ 200ರಿಂದ 400 ಕ್ಷಿಪಣಿಗಳನ್ನು ಉಡಾಯಿಸಿದರೆ, ಅವುಗಳ ಪೈಕಿ ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ನ ವೈಮಾನಿಕ ರಕ್ಷಣಾ ವ್ಯವಸ್ಥೆಯು ಧ್ವಂಸಗೈಯ್ಯುತ್ತವೆ.
ಇಸ್ರೇಲ್ನ ರಕ್ಷಣಾ ವ್ಯವಸ್ಥೆ ಅಷ್ಟು ಬಲಿಷ್ಠವಾಗಿದೆ. ಆದರೆ, ಭಾರತವು ಉಡಾಯಿಸಿದ 24 ಕ್ಷಿಪಣಿಗಳಲ್ಲಿ ಒಂದನ್ನು ತಡೆಯಲೂ ನಮಗೆ ಸಾಧ್ಯವಾಗಲಿಲ್ಲ. ಅಲ್ಲದೇ ಭಾರತವೇನೂ ನಮ್ಮ ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಲ್ಲ. ಅವರೇನಾದರೂ ಸೇನಾ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿದ್ದರೆ, ಆಗ ನೀವು ಹೇಗೆ ತಡೆಯುತ್ತಿದ್ದಿರಿ, ಏನು ಮಾಡುತ್ತಿದ್ದಿರಿ?” ಎಂದು ಪಾಕ್ ನಾಗರಿಕ ಪ್ರಶ್ನಿಸಿದ್ದು, ತಮ್ಮದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ಸೇನಾ ಪಡೆಗಳು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನದ ಮಾಧ್ಯಮಗಳನ್ನೂ ತರಾಟೆಗೆ ತೆಗೆದುಕೊಂಡ ಅವರು, “ಅವೆಲ್ಲವೂ ಸುಳ್ಳಿನ ಕಂತೆಗಳು” ಎಂದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಮಂಗಳವಾರ ಮಧ್ಯರಾತ್ರಿ “ಆಪರೇಷನ್ ಸಿಂದೂರ” ಎಂಬ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ದಾಳಿಯಲ್ಲಿ 80ಕ್ಕೂ ಅಧಿಕ ಉಗ್ರರು ಹತ್ಯೆಗೀಡಾಗಿದ್ದರು.