ಭಾರತ ಅಂದ್ರೆ ಹಾವಾಡಿಗರ ದೇಶ, ಭಾರತ ಅಂದ್ರೆ ಹಿಂದುಳಿದ ದೇಶ, ಬಡತನದಿಂದ ನರಳುತ್ತಿರುವ ದೇಶ ಅನ್ನೋ ಕಾಲವೊಂದಿತ್ತು. ಭಾರತದ ಸ್ಥಿತಿಯೂ ಕಷ್ಟದಲ್ಲಿತ್ತು ಹಾಗೂ ವಿದೇಶಿ ಪತ್ರಕರ್ತರೂ ಹೀಗೆಯೇ ಬಿಂಬಿಸಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ಅಭಿವೃದ್ಧಿ ದೃಷ್ಟಿಯಿಂದ ಸುದ್ದಿಯಾಗುತ್ತಿದೆ. ಅಲ್ಲದೆ, ಜಾಗತಿಕ ಬೃಹತ್ ಆರ್ಥಿಕ ದೇಶಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಮುಂದಿನ ವರ್ಷಗಳಲ್ಲಿ ಭಾರತವೇ ಬಾಸ್ ಆಗುವ ಲಕ್ಷಣಗಳೂ ಗೋಚರಿಸಿವೆ.
ಆರ್ಥಿಕ ಅಭಿವೃದ್ಧಿಯಲ್ಲಿ ಭಾರತವೇ ಸ್ಟ್ರಾಂಗ್
ಜಪಾನ್ ಅನ್ನೇ ಹಿಂದಿಕ್ಕಿದ ಗ್ರೇಟ್ ಇಂಡಿಯಾ
ಭಾರತವೀಗ ಜಗತ್ತಿನಲ್ಲೇ 4ನೇ ಬಲಿಷ್ಠ ರಾಷ್ಟ್ರ
ಹೌದು, ಜಾಗತಿಕವಾಗಿ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಭಾರತವೀಗ ಜಪಾನ್ ಅನ್ನೇ ಹಿಂದಿಕ್ಕಿದೆ. ಆ ಮೂಲಕ ಜಗತ್ತಿನಲ್ಲೇ ಬೃಹತ್ ಆರ್ಥಿಕತೆ ಹೊಂದಿರುವ ನಾಲ್ಕನೇ ರಾಷ್ಟ್ರವಾಗಿ ಭಾರತವು ಹೊರಹೊಮ್ಮಿದೆ. ಇದು ಪ್ರತಿ ಭಾರತೀಯನೂ ಹೆಮ್ಮೆ ಪಡುವ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತವು ದೊಡ್ಡ ಗುರಿ ಹೊಂದಲು ಇದು ಸಹಕಾರಿಯಾಗಿದೆ.
ಅವಧಿಗೂ ಮುನ್ನವೇ ಭಾರತ ಗುರಿ ಸಾಧನೆ
ದೇಶದ ಆರ್ಥಿಕತೆ ಈಗ 4.187 ಲಕ್ಷ ಕೋಟಿ ಡಾಲರ್
ಜಪಾನ್ ಗಿಂತಲೂ ನಮ್ಮ ಆರ್ಥಿಕತೆಯೇ ಮುಂದೆ
ಭಾರತದ ಆರ್ಥಿಕತೆಯ ಮೌಲ್ಯವು 2026ರ ವೇಳೆಗೆ 4.187 ಟ್ರಿಲಿಯನ್ ಡಾಲರ್ ಆಗಿದ್ದರೆ, ಜಪಾನ್ ಆರ್ಥಿಕತೆಯು 4.186 ಲಕ್ಷ ಕೋಟಿ ಡಾಲರ್ ಆಗಿರಲಿದೆ ಎಂದು ಐಎಂಎಫ್ ಅಂದಾಜಿಸಿತ್ತು. ಇದರಿಂದಾಗಿ, ಅವಧಿಗೂ ಮುನ್ನವೇ ಭಾರತವೀಗ ಗುರಿ ಸಾಧಿಸಿದಂತಾಗಿದೆ. ಹಾಗೆಯೇ, ಈಗಿರುವ ಶೇ.6.2ರ ಜಿಡಿಪಿ ಬೆಳವಣಿಗೆ ದರವು 2026ರಲ್ಲಿ ಶೇ.6.3ಕ್ಕೆ ಏರಿಕೆಯಾಗಲಿದೆ ಎಂದೂ ವರದಿ ತಿಳಿಸಿದೆ.
ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಜಿಗಿಯಲಿದೆಯೇ ಭಾರತ?
ಜರ್ಮನಿಯನ್ನೂ ಹಿಂದಿಕ್ಕಲು ಎಷ್ಟು ಸಮಯ ಬೇಕು?
ಟಾಪ್ 2 ಸ್ಥಾನದಲ್ಲಿ ಇರುವ ದೇಶಗಳು ಯಾವವು?
ಭಾರತವೀಗ ಜಗತ್ತಿನ್ಲಲೇ ನಾಲ್ಕನೇ ಬೃಹತ್ ಆರ್ಥಿಕ ದೇಶವಾಗಿ ಹೊರಹೊಮ್ಮಿದ್ದು, ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನದಲ್ಲಿರುವ ಜರ್ಮನಿಯನ್ನೂ ಹಿಂದಿಕ್ಕಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರ್ತಿವೆ. ಜರ್ಮನಿಯ ಆರ್ಥಿಕತೆಯು 4.7 ಲಕ್ಷ ಕೋಟಿ ಡಾಲರ್ ಆಗಿದ್ದು, ಇದನ್ನೂ ಕೆಲವೇ ವರ್ಷಗಳಲ್ಲಿ ಭಾರತ ಮೀರಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು, ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ, ಎರಡನೇ ಸ್ಥಾನದಲ್ಲಿ ಚೀನಾ ಇದೆ.
ಭಾರತದ ಆರ್ಥಿಕತೆ ವೃದ್ಧಿಗೆ ಕಾರಣವೇನು?
2014ರಲ್ಲಿ 10ನೇ ಸ್ಥಾನದಲ್ಲಿತ್ತು ನಮ್ಮ ದೇಶ
ಕೇಂದ್ರ, ರಾಜ್ಯಗಳ ಪಾಲೂ ಪ್ರಗತಿಗೆ ಇದೆ
ಭಾರತದ ಆರ್ಥಿಕತೆಯು 2014ರಲ್ಲಿ ವಿಶ್ವದಲ್ಲೇ 10ನೇ ಸ್ಥಾನದಲ್ಲಿತ್ತು. ಆದರೆ, ಕಳೆದ 11 ವರ್ಷಗಳಲ್ಲಿಯೇ ಭಾರತವು ಆರ್ಥಿಕತೆ ದೃಷ್ಟಿಯಿಂದ ಮಹತ್ವದ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು, ರಾಜ್ಯ ಸರ್ಕಾರಗಳಿಂದಲೂ ದೇಶದ ಆರ್ಥಿಕತೆಯ ಏಳಿಗೆಗೆ ಸಹಕಾರ ಸಿಕ್ಕಿದೆ. ಇದರಿಂದಾಗಿ ಭಾರತವು ಮಹತ್ವದ ಸಾಧನೆ ಮಾಡಲು ಸಾಧ್ಯವಾಗಿದೆ.
11 ವರ್ಷದಲ್ಲಿ 26 ಕೋಟಿ ಜನ ಬಡತನ ಮುಕ್ತ
ಕೈಗಾರಿಕೆ, ಉದ್ಯೋಗ, ಮೂಲಸೌಕರ್ಯ ವೃದ್ಧಿ
ಗ್ರಾಮೀಣ ಏಳಿಗೆ, ರೈತರಿಗೆ ನಗದು ವರ್ಗಾವಣೆ ಕಾರಣ
ಭಾರತದಲ್ಲಿ ಕಳೆದ 11 ವರ್ಷಗಳಲ್ಲಿ 26 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಇತ್ತೀಚೆಗೆ ವಿಶ್ವಬ್ಯಾಂಕ್ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿದ್ದ ಕಡುಬಡವರ ಸಂಖ್ಯೆ 34 ಕೋಟಿಯಿಂದ 7.5 ಕೋಟಿಗೆ ಇಳಿಕೆಯಾಗಿದೆ. ಇನ್ನು ಉದ್ಯಮಗಳ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ಧಿ, ಬಡವರಿಗೆ ಉಚಿತವಾಗಿ ಪಡಿತರ ವಿತರಣೆ, ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ನಗದು ವರ್ಗಾವಣೆಯಂತಹ ಯೋಜನೆಗಳು ದೇಶದ ಆರ್ಥಿಕತೆಯನ್ನು ಮೇಲೆತ್ತಿವೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ,ಭಾರತದ ಆರ್ಥಿಕತೆಯು ಜಗತ್ತಿನಲ್ಲೇ ಬಲಿಷ್ಠವಾಗುತ್ತ ಹೋಗುತ್ತಿದ್ದು, ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಭಾರತವೇ ಬಾಸ್ ಆಗುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಭಾರತ ಅಂತಹ ಸಾಧನೆ ಮಾಡಲಿ ಎಂದು ನಾವೂ ಆಶಿಸೋಣ, ಕೊಡುಗೆ ನೀಡೋಣ.