ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ವಿವಾದವನ್ನು ಬಗೆಹರಿಸಲು ಭಾರತ ಯಾವತ್ತೂ ಮೂರನೇ ರಾಷ್ಟ್ರದ ನೆರವು ಕೇಳಿಲ್ಲ, ಮಧ್ಯಸ್ಥಿಕೆಯನ್ನು ನಾವು ಒಪ್ಪುವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ದೂರವಾಣಿ ಸಂಭಾಷಣೆ ವೇಳೆ ಅವರು ಈ ವಿಚಾರವನ್ನು ಸ್ಪಷ್ಟವಾಗಿ ಟ್ರಂಪ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪಾಕ್ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ನಡೆದಿದ್ದ ಉಭಯ ದೇಶಗಳ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯ ಮೂಲಕ ಅಂತ್ಯ ಹಾಡಲಾಗಿತ್ತು. ಆದರೆ, ಭಾರತ-ಪಾಕಿಸ್ತಾನದ ಮಧ್ಯೆ ಮಧ್ಯಸ್ಥಿಕೆ ವಹಿಸಿದ್ದು ನಾನೇ, ಯುದ್ಧ ನಿಲ್ಲಿಸಿದ್ದು ನಾನೇ, ವ್ಯಾಪಾರದ ಬೆದರಿಕೆಯೊಡ್ಡಿ ಯುದ್ಧ ನಿಲ್ಲಿಸಿದ್ದೇನೆ ಎಂದು ಟ್ರಂಪ್ ಅಂದಿನಿಂದ ಇಂದಿನವರೆಗೂ ಕೊಚ್ಚಿಕೊಂಡು ಬಂದಿದ್ದಾರೆ. ಈಗ ನಾವು ಯಾರ ಮಧ್ಯಸ್ಥಿಕೆಯನ್ನೂ ಬಯಸಿಲ್ಲ, ಅದನ್ನು ಸ್ವೀಕರಿಸುವುದೂ ಇಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರು ದೊಡ್ಡಣ್ಣನ ಬಾಯಿ ಮುಚ್ಚಿಸಿದ್ದಾರೆ.
ಇಂದು ಬೆಳಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸುದ್ದಿಗೋಷ್ಠಿ ನಡೆಸಿ, ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿಯವರು ಕೆನಡಾದಲ್ಲಿ ಜಿ7 ಶೃಂಗದಲ್ಲಿ ಭಾಗಿಯಾಗಲೆಂದು ತೆರಳಿದ್ದು, ಮಂಗಳವಾರ ರಾತ್ರಿ ಮೋದಿ ಹಾಗೂ ಟ್ರಂಪ್ ನಡುವೆ 35 ನಿಮಿಷಗಳ ದೂರವಾಣಿ ಮಾತುಕತೆ ನಡೆದಿದೆ. ಈ ವೇಳೆ ಟ್ರಂಪ್ ಅವರು ಆಪರೇಷನ್ ಸಿಂದೂರ ಕುರಿತು ಮೋದಿಯವರಿಂದ ವಿವರಣೆ ಪಡೆದಿದ್ದಾರೆ. ಈ ವೇಳೆ ಮೋದಿ, “ಭಾರತದ ಪ್ರತಿಕ್ರಿಯೆಯು ನಿಖರವಾಗಿತ್ತು.
ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳನ್ನು ಮಾತ್ರವೇ ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು” ಎಂಬುದನ್ನು ತಿಳಿಸಿದ್ದಾರೆ. ಜೊತೆಗೆ, ಮೂರನೇ ದೇಶದ ಮಧ್ಯಸ್ಥಿಕೆ ಕುರಿತೂ ಮೋದಿ ಸ್ಪಷ್ಟಪಡಿಸಿದ್ದು, ನಮಗೆ ಯಾವ ಸಂಧಾನಕಾರರ ಅಗತ್ಯವೂ ಇಲ್ಲ ಎಂದು ಖಡಕ್ಕಾಗಿ ನುಡಿದಿದ್ದಾರೆ. ಜೊತೆಗೆ ಇದು ಭಾರತದ ರಾಜಕೀಯ ಪಕ್ಷಗಳ ಒಮ್ಮತದ ನಿರ್ಧಾರ ಎಂದೂ ತಿಳಿಸಿದ್ದಾರೆ ಎಂದು ವಿಕ್ರಂ ಮಿಸ್ರಿ ಮಾಹಿತಿ ನೀಡಿದ್ದಾರೆ.
ಮೇ 12ರಂದು ದೇಶವನ್ನು ಉದ್ದೇಶಿಸಿ ಮಾತನಾಡುವಾಗಲೂ ಪ್ರಧಾನಿ ಮೋದಿಯವರು, “ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವವರೆಗೂ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ನೀಡುವವರೆಗೂ ಪಾಕಿಸ್ತಾನದ ಜೊತೆಗೆ ಮಾತುಕತೆ ಇಲ್ಲ” ಎಂದು ಹೇಳಿದ್ದರು. ಪಾಕ್ ಜೊತೆ ಇನ್ನು ಯಾವುದೇ ಮಾತುಕತೆ ನಡೆಯುವುದಿದ್ದರೂ ಅದು ಪಿಒಕೆ ಬಗ್ಗೆ ಮಾತ್ರ ಎಂದಿದ್ದರು.
ಅಮೆರಿಕ ಪ್ರವಾಸದಲ್ಲಿರುವ ಪಾಕ್ ಸೇನಾ ಮುಖ್ಯಸ್ಥ ಜ. ಅಸೀಮ್ ಮುನೀರ್ ಅವರು ಟ್ರಂಪ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದ ದೂರವಾಣಿ ಕರೆ ಮಹತ್ವ ಪಡೆದಿದೆ.