ಪಾಕಿಸ್ತಾನ ಎಂದೂ ಊಹಿಸದ, ಕನಸಲ್ಲೂ ಕಲ್ಪಿಸದಂತಹ ಹೊಡೆತವನ್ನೀಗ ಭಾರತ ನೀಡಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ನಡೆಸಿದ ಶತಮಾನದ ಐತಿಹಾಸಿಕ ದಾಳಿಗೆ ಬಿಲದಲ್ಲಿ ಅಡಗಿದ್ದ ದೈತ್ಯ ಜಿಹಾದಿ ಹೆಗ್ಗಣಗಳೆಲ್ಲಾ ಸುಟ್ಟು ಬೂದಿಯಾಗಿವೆ. ಅದರಲ್ಲೂ ಜೈಶ್ ಎ ಮೊಹಮ್ಮದ್ ಮತ್ತು ಲಶ್ಕರ್ ಎ ತೋಯ್ಬಾ ಸಂಘಟನೆ ತನ್ನ ಮೊದಲ ಹಂತದ ಎಲ್ಲ ನಾಯಕರನ್ನ ಏಕಕಾಲಕ್ಕೆ ಕಳೆದುಕೊಂಡು ಅಂತಿಮ ದಿನಗಳನ್ನು ಎಣಿಸುತ್ತಿದೆ.
ಅಷ್ಟಕ್ಕೂ ಭಾರತದ ಡೆಡ್ಲಿ ದಾಳಿಗೆ ಐವರು ಅತ್ಯುಗ್ರರು ಒಂದೇ ಸಮಯದಲ್ಲಿ ಹತರಾಗಿದ್ದಾರೆ. ಈ ಪೈಕಿ, ಮುದ್ದಾಸರ್ ಖಾದಿನ್, ಹಫೀಜ್ ಮೊಹಮದ್ ಜಮೀಲ್, ಮೊಹಮದ್ ಯೂಸಫ್ ಅಜರ್, ಖಾಲಿದ್ ಅಲಿಯಾಸ್ ಅಬು ಅಕ್ಸಾ ಮತ್ತು ಮೊಹಮ್ಮದ್ ಹಸನ್ ಖಾನ್ ಸಮಾಧಿಯಾಗಿದ್ದಾರೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮುದಾಸ್ಸರ್ ಖಾದಿನ್ ಅಲಿಯಾಸ್ ಮುದಾಸ್ಸರ್ ಅಬು ಜುಂದಾಲ್ ಭಾರತದ ಕ್ಷಿಪಣಿ ದಾಳಿಗೆ ಛಿದ್ರವಾಗಿ ಹೋಗಿದ್ದಾನೆ. ಲಷ್ಕರ್ ನ ಪ್ರಮುಖ ನಾಯಕನಾಗಿರುವ ಖಾದಿನ್ ಮರ್ಡಿಕೆ ಶಿಬಿರದ ಮುಖ್ಯಸ್ಥನಾಗಿದ್ದ. ಭಾರತದ ಗಡಿಯಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿರುವ ಮರ್ಡಿಕೆನಲ್ಲಿ ಉಗ್ರ ತರಬೇತಿ ಶಿಬಿರ ನಡೆಸ್ತಿದ್ದ. ಅಸಲಿಗೆ ಈ ಮರ್ಡಿಕೆ ಎಲ್ ಇಟಿಯ ಕೇಂದ್ರ ಕಚೇರಿಯೂ ಹೌದು. 2008ರ ಮುಂಬೈ ದಾಳಿಗೆ ಕಸಬ್, ಹೆಡ್ಲಿ ಸೇರಿ ಎಲ್ಲ ರಕ್ತ ಪೀಪಾಸುಗಳಿಗೆ ಇದೇ ಖಾದಿನ್ ಅವತ್ತು ಮರ್ಡಿಕೆನಲ್ಲೇ ತರಬೇತಿ ನೀಡಿದ್ದ. ಈ ಸತ್ಯವನ್ನ ಅಂದು ಕಸಬ್ ಕೂಡಾ ಒಪ್ಪಿಕೊಂಡಿದ್ದ.
ಇನ್ನು ಮತ್ತೋರ್ವ ನರ ರಾಕ್ಷಸ ಈ ಹಫೀಜ್ ಮೊಹಮದ್ ಜಮೀಲ್. ಜೈಶ್ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ನ ಅಳಿಯ ಈ ಜಮೀಲ್. ಇದೇ ಜಮೀಲ್ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲೆಂದೇ ಯುವಕರಿಗೆ ತರಬೇತಿ ನೀಡುತ್ತಿದ್ದ. ಪಾಕಿಸ್ತಾನದಿಂದ 100 ಕಿಲೋಮೀಟರ್ ದೂರದ ಪಿಒಕೆಯ ಭಾವಲ್ಪುರದ ಸುಭಾನ್ ಅಲಿ ಮಸೀದಿಯೇ ಈತನ ಕೇಂದ್ರ ಕಚೇರಿ. ಇಲ್ಲೇ ಜಮೀಲ್ ಜೈಶ್ ಸಂಘಟನೆಗೆ ಧರ್ಮದ ವಿಷ ಬೀಜ ಬಿತ್ತಿ ಯುವಕರನ್ನ ಆತ್ಮಾಹುತಿ ದಳಕ್ಕೆ ನೇಮಕ ಮಾಡಿಕೊಳ್ಳುವ ಕಾಯಕ ಮಾಡುತ್ತಿದ್ದ. ಹೀಗಾಗಿಯೇ ಭಾವಲ್ಪುರ ಶಿಬಿರವನ್ನ ನೇಮಕಾತಿ, ತರಬೇತಿ ಮತ್ತು ಗಡಿಯೊಳಗೆ ನುಸುಳಲು ವೇದಿಕೆ ಸಿದ್ಧಪಡಿಸೋ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗ್ತಿತ್ತು. ಈ ಹಿನ್ನಲೆಯಲ್ಲೇ ಭಾರತದ ಆಪರೇಷನ್ ಸಿಂಧೂರವನ್ನು ಪ್ಲ್ಯಾನ್ ಮಾಡಿ ಈ ಉಗ್ರರ ರಣಬೇಟೆಯಾಡಲಾಗಿದೆ. ಈ ಮೂಲಕ ಜೈಶ್ ನ ರಕ್ತಪೀಪಾಸು ಮಸೂದ್ ಅಜರ್ ಕುಟುಂಬದ 10 ಮಂದಿ ಸೇರಿದಂತೆ 14 ಮಂದಿಗೆ ಗೋರಿಗೆ ಸೇರಿಸಲಾಗಿದೆ.