ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Terror Attack) ನಂತರ ಪಾಕಿಸ್ತಾನದ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವ ಭಾರತವು, ಈಗ ಪಾಕ್ನಿಂದ ಎಲ್ಲ ರೀತಿಯ ಆಮದುಗಳನ್ನೂ ನಿರ್ಬಂಧಿಸಿ ಹೊಸ ಆದೇಶ ಹೊರಡಿಸಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ. ಇದು ಪಾಕಿಸ್ತಾನದಿಂದ ಸರಬರಾಜಾಗುವ ಎಲ್ಲಾ ಉತ್ಪನ್ನಗಳಿಗೂ ಅನ್ವಯಿಸುತ್ತದೆ ಎಂದೂ ಸ್ಪಷ್ಟಪಡಿಸಿದೆ.
“ಪಾಕಿಸ್ತಾನ ಮೂಲದ ಅಥವಾ ಅಲ್ಲಿಂದ ರಫ್ತಾಗುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಿಷೇಧಕ್ಕೆ ಯಾವುದೇ ವಿನಾಯಿತಿ ನೀಡಬೇಕೆಂದರೂ ಭಾರತ ಸರ್ಕಾರದ ಪೂರ್ವಾನುಮತಿ ಅಗತ್ಯ” ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ.
ಪಹಲ್ಗಾಮ್ ದಾಳಿಯಲ್ಲಿ ಉಗ್ರರು 26 ಅಮಾಯಕರನ್ನು ಕೊಲೆಗೈದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಏಕೈಕ ವ್ಯಾಪಾರ ಮಾರ್ಗವಾದ ವಾಘಾ-ಅಟ್ಟಾರಿ ಕ್ರಾಸಿಂಗ್ ಅನ್ನು ಮುಚ್ಚಲಾಗಿತ್ತು.
ಪಾಕಿಸ್ತಾನದಿಂದ ಭಾರತಕ್ಕೆ ಮುಖ್ಯವಾಗಿ ಔಷಧ ಉತ್ಪನ್ನಗಳು, ಹಣ್ಣುಗಳು ಮತ್ತು ಎಣ್ಣೆಕಾಳುಗಳನ್ನು ಆಮದು ಮಾಡಲಾಗುತ್ತದೆ. 2019 ರ ಪುಲ್ವಾಮಾ ದಾಳಿಯ ನಂತರದ ವರ್ಷಗಳಲ್ಲಿ ಭಾರತವು ಪಾಕಿಸ್ತಾನದ ಉತ್ಪನ್ನಗಳ ಮೇಲೆ ಶೇಕಡಾ 200ರಷ್ಟು ಸುಂಕವನ್ನು ವಿಧಿಸಿದ ಕಾರಣ, ಆಮದು ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. 2024-25ರಲ್ಲಿ ಇದು ಒಟ್ಟು ಆಮದಿನ 0.0001% ಕ್ಕಿಂತ ಕಡಿಮೆಯಾಗಿದೆ ಎಂದು ವರದಿಗಳು ಹೇಳಿವೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರರು ದಾಳಿ ನಡೆಸಿ 26 ನಾಗರಿಕರನ್ನು ಹತ್ಯೆಗೈದಿದ್ದರು. ಪಾಕಿಸ್ತಾನದೊಂದಿಗೆ ಭಯೋತ್ಪಾದಕ ಸಂಪರ್ಕಗಳು ಹೊರಹೊಮ್ಮುತ್ತಿದ್ದಂತೆ ಉಭಯ ದೇಶಗಳ ನಡುವಿನ ಸಂಬಂಧಗಳು ಹಳಸಿದ್ದವು.
ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಪ್ರತೀಕಾರದ ಕ್ರಮಗಳನ್ನು ಕೈಗೊಂಡಿದೆ. 1960ರಲ್ಲಿ ಉಭಯ ದೇಶಗಳು ಸಹಿ ಹಾಕಿದ ನಿರ್ಣಾಯಕ ನೀರು ಹಂಚಿಕೆ ಒಪ್ಪಂದವಾದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಲ್ಲದೇ, ಪಾಕಿಸ್ತಾನಿ ಪ್ರಜೆಗಳ ಎಲ್ಲಾ ವೀಸಾಗಳನ್ನು ರದ್ದುಪಡಿಸಿದೆ. ಭಾರತದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನೀಯರಿಗೆ ಭಾರತವನ್ನು ತೊರೆಯಲು ಗಡುವು ನೀಡಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನವೂ ಬೆದರಿಕೆ ಹಾಕಿದೆ.
ಇದರ ಜೊತೆಗೆ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪಾಕಿಸ್ತಾನಿ ಪಡೆಗಳು ಭಾರತೀಯ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಗುಂಡಿನ ದಾಳಿ ನಡೆಸುವ ಮೂಲಕ ಭಾರತವನ್ನು ಪ್ರಚೋದಿಸಲೂ ಪ್ರಯತ್ನಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಈಗ ಪಾಕ್ ಉತ್ಪನ್ನಗಳಿಗೂ ಭಾರತ ನಿರ್ಬಂಧ ಹೇರುವ ಮೂಲಕ ಆ ದೇಶದ ಮೇಲೆ ದೊಡ್ಡಮಟ್ಟದ ಪ್ರಹಾರ ನಡೆಸಿದೆ.