ನವದೆಹಲಿ: ಪ್ರಾದೇಶಿಕ ರಾಜತಾಂತ್ರಿಕತೆಯಲ್ಲಿ ಹೊಸ ಅಧ್ಯಾಯ ಎಂಬಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಇಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರೊಂದಿಗೆ ಮಾತುಕತೆ (India-Afghan) ನಡೆಸಿದ್ದಾರೆ. ದೂರವಾಣಿ ಮೂಲಕ ಈ ಅಧಿಕೃತ ಮಾತುಕತೆ ನಡೆದಿದೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದೊಂದಿಗೆ ಭಾರತ ನಡೆಸಿದ ಮೊಟ್ಟ ಮೊದಲ ಸಚಿವರ ಮಟ್ಟದ ಮಾತುಕತೆ ಇದಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಪಾಕ್ ಪ್ರೇರಿತ ಉಗ್ರರು ಹತ್ಯೆಗೈದ ಕೃತ್ಯವನ್ನು ತಾಲಿಬಾನ್ ಆಡಳಿತವು ಖಂಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮೊದಲ ಬಾರಿಗೆ ಸಚಿವರ ಮಟ್ಟದ ಮಾತುಕತೆ
ದೂರವಾಣಿ ಸಂಭಾಷಣೆಯ ಬಳಿಕ ಟ್ವೀಟರ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಚಿವ ಜೈಶಂಕರ್, “ಇಂದು ನಾನು ಆಫ್ಘನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಖಿ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ್ದೇನೆ. ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಆಫ್ಘನ್ ನಿರ್ಧಾರವನ್ನು ನಾವು ಶ್ಲಾಘಿಸುತ್ತೇವೆ. ಅಫ್ಘಾನಿಸ್ತಾನದ ಜನರೊಂದಿಗೆ ಭಾರತದ ಸಾಂಪ್ರದಾಯಿಕ ಗೆಳೆತನ ಮತ್ತು ಅವರ ಅಭಿವೃದ್ಧಿಗಾಗಿ ಭಾರತ ನೀಡಿರುವ ಬೆಂಬಲದ ಬಗ್ಗೆಯೂ ಈ ವೇಳೆ ಚರ್ಚೆ ನಡೆದಿದೆ. ನಮ್ಮ ಈ ಸಹಕಾರವನ್ನು ಮುಂದಕ್ಕೆ ಒಯ್ಯುವ ಕುರಿತೂ ಚರ್ಚಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನಕ್ಕೆ ಟಾಂಗ್
ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಘಟನೆಗಳಿಗೆ ತಾಲಿಬಾನ್ ಕಾರಣ ಎಂಬ ಪಾಕಿಸ್ತಾನದ ಸುಳ್ಳಿಗೂ ವಿದೇಶಾಂಗ ಸಚಿವರು ಟಾಂಗ್ ನೀಡಿದ್ದಾರೆ. ಸುಳ್ಳು ಮತ್ತು ಆಧಾರರಹಿತ ವರದಿಗಳು ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಅಪನಂಬಿಕೆ ಹುಟ್ಟಿಸಲು ಪಾಕ್ ಮಾಧ್ಯಮಗಳು ನಡೆಸಿದ ಪ್ರಯತ್ನವನ್ನು ಮುತ್ತಖಿ ಅವರನ್ನು ಖಂಡಿಸಿರುವುದು ಕೂಡ ಸ್ವಾಗತಾರ್ಗ ಎಂದಿದ್ದಾರೆ.
ಏನೇನು ಚರ್ಚೆ?
ಭಾರತ-ಆಫ್ಘನ್ ಮಾತುಕತೆ ವೇಳೆ ತಾಲಿಬಾನ್ ಸಚಿವ ಮುತ್ತಖಿ ಅವರು, ಆಫ್ಘನ್ ನಾಗರಿಕರಿಗೆ ವಿಶೇಷವಾಗಿ ವೈದ್ಯಕೀಯ ಚಿಕಿತ್ಸೆಗೆಂದು ಬರುವವರಿಗೆ ಹೆಚ್ಚು ವೀಸಾಗಳನ್ನು ಒದಗಿಸುವಂತೆ ಜೈಶಂಕರ್ ಗೆ ಮನವಿ ಮಾಡಿದ್ದಾರೆ. ಇದೇ ವೇಳೆ ದ್ವಿಪಕ್ಷೀಯ ವ್ಯಾಪಾರ, ಭಾರತದ ಜೈಲುಗಳಲ್ಲಿರುವ ಆಫ್ಘನ್ ಕೈದಿಗಳ ಬಿಡುಗಡೆ ಹಾಗೂ ಇರಾನ್ನಲ್ಲಿರುವ ಛಬಹಾರ್ ಬಂದು ಅಭಿವೃದ್ಧಿ ಕುರಿತೂ ಚರ್ಚಿಸಲಾಗಿದೆ ಎಂದು ತಾಲಿಬಾನ್ ಸಂವಹನ ಇಲಾಖೆ ನಿರ್ದೇಶಕ ಹಫೀಜ್ ಜಿಯಾ ಅಹ್ಮದ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಯಾವತ್ತಿಗೂ ರಾಜಿ ಇಲ್ಲ; ಜೈ ಶಂಕರ್
ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನವು ಎಲ್ಲ ವ್ಯಾಪಾರ ಒಪ್ಪಂದಗಳನ್ನು ರದ್ದು ಮಾಡಿ, ಗಡಿಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಛಬಹಾರ್ ಬಂದರು ಚರ್ಚೆಯು ಹೆಚ್ಚು ಮಹತ್ವ ಪಡೆದಿದೆ. ಎಲ್ಲ ದಿಕ್ಕುಗಳಿಂದಲೂ ಭೂಪ್ರದೇಶವನ್ನೇ ಹೊಂದಿರುವ ಅಫ್ಘಾನಿಸ್ತಾನಕ್ಕೂ ಇದರ ಪರಿಣಾಮ ತಟ್ಟಿದ್ದು, ಅದು ಮಾರ್ಗದ ಮೂಲಕ ಭಾರತವನ್ನು ತಲುಪಲು ಪಾಕಿಸ್ತಾನವನ್ನು ದಾಟಿಯೇ ಬರಬೇಕು. ಅಲ್ಲದೇ, ಭಾರತ ಮತ್ತು ಅಫ್ಘಾನಿಸ್ತಾನ ಭೂ ಗಡಿಯನ್ನು ಹಂಚಿಕೊಂಡಿದ್ದರೂ, 1947ರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಆ ಗಡಿಯನ್ನೂ ಮುಚ್ಚಿದೆ. ಈಗ ಎರಡೂ ದೇಶಗಳಿಗಿರುವ ಏಕೈಕ ಆಯ್ಕೆಯೆಂದರೆ ಇರಾನ್ ನ ಛಬಹಾರ್ ಬಂದರು ಮೂಲಕ ವ್ಯಾಪಾರ ನಡೆಸುವುದು.