ಭಾರತೀಯ ರೈಲ್ವೆಯು ಎಲ್ಲರ ಹೆಮ್ಮೆಯಾಗಿದೆ. ನಿತ್ಯ ಲಕ್ಷಾಂತರ ಜನರು ರೈಲುಗಳಲ್ಲಿ ಸಂಚರಿಸುತ್ತಾರೆ. ರೈಲ್ವೆ ಇಲಾಖೆಯು ಸುಮಾರು 12 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಅದರಲ್ಲೂ, ಇತ್ತೀಚಿನ ವರ್ಷಗಳಲ್ಲಿ ರೈಲುಗಳ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲಾಗಿದೆ. ಇನ್ನು, ಪ್ರಯಾಣಿಕರಿಗೆ ರೈಲ್ವೆ ನಿಯಮಗಳೂ ಬದಲಾಗಿದ್ದು, ರೈಲು ಹತ್ತುವ ಮುನ್ನ ಕೆಲ ನಿಯಮಗಳನ್ನು ತಿಳಿದುಕೊಳ್ಳಬೇಕಾದುದು ಅತ್ಯವಶ್ಯಕವಾಗಿದೆ. ಹಾಗಾದ್ರೆ, ಯಾವೆಲ್ಲ ನಿಯಮ ಬದ್ಲಾಗಿವೆ? ಪ್ರಯಾಣಿಕರಿಗೆ ಏನೆಲ್ಲ ಗೊತ್ತಿರಬೇಕು? ಇದೇ ಇವತ್ತಿನ ಸ್ಪೆಷಲ್ ಸ್ಟೋರಿ.
ಮಕ್ಕಳನ್ನು ಕರೆದುಕೊಂಡು ಹೋಗುವಾಗ ಹುಷಾರು
ಅವರ ವಯಸ್ಸಿಗೆ ಅನುಗುಣವಾಗಿ ಟಿಕೆಟ್ ಪಡೆಯಿರಿ
ಆ ಮೂಲಕ ದಂಡ ಪಾವತಿಸೋದ್ರಿಂದ ಪಾರಾಗಿ
ರೈಲುಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಹುಷಾರಾಗಿರಬೇಕು. ಭಾರತೀಯ ರೈಲ್ವೆಯ ಪ್ರಕಾರ, ಮಗುವಿಗೆ 1ರಿಂದ 4 ವರ್ಷ ವಯಸ್ಸಿದ್ದರೆ, ಯಾವುದೇ ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ. ಮಗು ಪೋಷಕರೊಂದಿಗೆ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಈ ವಯಸ್ಸಿನ ಮಗುವಿಗೆ ಅಲಾಟೆಡ್ ಸೀಟ್ ಅಥವಾ ಬರ್ತ್ ದೊರೆಯೋದಿಲ್ಲ. ಪೋಷಕರೊಬ್ಬರು ತಮ್ಮ ಸೀಟಿನಲ್ಲಿ ಮಗುವನ್ನು ಕೂರಿಸಿಕೊಳ್ಳಬೇಕು.
ಮಗುವಿನ ವಯಸ್ಸು 5ರಿಂದ 12ರ ನಡುವೆ ಇದ್ದರೆ, ಅವರಿಗೆ ಅರ್ಧ ಬೆಲೆಯಲ್ಲಿ ಟಿಕೆಟ್ ಲಭ್ಯವಿದೆ. ಆದರೆ ಈ ಅರ್ಧ ಟಿಕೆಟ್ನೊಂದಿಗೆ ಮಗುವಿಗೆ ಪ್ರತ್ಯೇಕ ಬರ್ತ್ ಅಥವಾ ಆಸನ ನೀಡಲಾಗದು. ಪೋಷಕರ ಸೀಟಿನಲ್ಲಿ ಅವನನ್ನು ಅಡ್ಜಸ್ಟ್ ಮಾಡಬೇಕಾಗುತ್ತದೆ. ಮಗುವಿಗೆ ಪ್ರತ್ಯೇಕ ಸೀಟ್ ಬೇಕೆಂದರೆ, ಪೂರ್ಣ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು 13 ವರ್ಷ ದಾಟಿದ ಮಕ್ಕಳಿಗೆ ಪೂರ್ತಿ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ.
ಟಿಕೆಟ್ ಬುಕ್ ಮಾಡುವಾಗಲೇ ಇರಲಿ ಎಚ್ಚರ
ಮಗುವಿನ ವಯಸ್ಸನ್ನು ಸರಿಯಾಗಿ ನಮೂದಿಸಿ
ಪ್ರಯಾಣ ಮಾಡುವಾಗ ದಾಖಲೆಗಳೂ ಬೇಕು
ಟಿಕೆಟ್ ಬುಕಿಂಗ್ ಸಮಯದಲ್ಲಿ ಮಗುವಿನ ವಯಸ್ಸು ಎಷ್ಟು ಎಂಬುದನ್ನು ಸರಿಯಾದ ದಾಖಲೆಗಳಿಂದ ಸಾಬೀತುಪಡಿಸಬೇಕು. ಜನನ ಪ್ರಮಾಣಪತ್ರ, ಶಾಲಾ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಚೀಟಿ ಹೊಂದಿರುವುದು ಅನಿವಾರ್ಯವಾಗಿದೆ. ಪ್ರಯಾಣ ಮಾಡುವಾಗಲೂ ಇವುಗಳನ್ನು ಇಟ್ಟುಕೊಂಡು ಹೋದರೆ ಟಿಸಿಗಳಿಂದ ಯಾವುದೇ ತೊಂದರೆಯಾಗೋದಿಲ್ಲ.
ವೇಟಿಂಗ್ ಲಿಸ್ಟ್ ಇದ್ರೆ ಪ್ರಯಾಣ ಮಾಡುವಂತಿಲ್ಲ
ಸ್ಲೀಪರ್ ಕೋಚ್, ಎಸಿ ಬೋಗಿಗಳಲ್ಲಿ ಹತ್ತುವಂತಿಲ್ಲ
ಹಣ ರಿಫಂಡ್ ಆಗೋ ಕಾರಣ ನಿಯಮ ಬದಲು
ರಿಸರ್ವೇಷನ್ ಮಾಡೋವಾಗ ಎಲ್ಲ ಸೀಟ್ ಗಳು ಬುಕ್ ಆಗಿರುತ್ತವೆ. ವೇಟಿಂಗ್ ಲಿಸ್ಟ್ ಇರುತ್ತದೆ. ಕೊನೆಯ ಕ್ಷಣದಲ್ಲಿ ಸೀಟ್ ಸಿಗಬಹುದು ಎಂದು ಬುಕ್ ಮಾಡುತ್ತೇವೆ. ಆದರೆ, ಚಾರ್ಟ್ ಪ್ರಿಪೇರ್ ಆದರೂ ಟಿಕೆಟ್ ಬುಕ್ ಆಗುವುದಿಲ್ಲ. ವೇಟಿಂಗ್ ಲಿಸ್ಟ್ ಇರುತ್ತದೆ. ಹೀಗೆ ವೇಟಿಂಗ್ ಲಿಸ್ಟ್ ನಲ್ಲಿ ಇದ್ದವರು ಸ್ಲೀಪರ್ ಕೋಚ್ ಹಾಗೂ ಎಸಿ ಕೋಚ್ ಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ತೀರಾ ಇತ್ತೀಚೆಗೆ ರೈಲ್ವೆ ಇಲಾಖೆಯು ನಿಯಮ ರೂಪಿಸಿದೆ. ಇದಕ್ಕೂ ಮೊದ್ಲು ವೇಟಿಂಗ್ ಲಿಸ್ಟ್ ಇದ್ದವರು ಈ ಬೋಗಿಗಳನ್ನು ಹತ್ತಬಹುದಾಗಿತ್ತು. ಆದ್ರೆ, ವೇಟಿಂಗ್ ಲಿಸ್ಟ್ ನಲ್ಲಿ ಇದ್ದೋರಿಗೆ ಟಿಕೆಟ್ ಹಣ ರಿಫಂಡ್ ಆಗುವ ಕಾರಣ ರೈಲು ಹತ್ತುವಂತಿಲ್ಲ ಎಂದು ನಿಯಮ ರೂಪಿಸಲಾಗಿದೆ.
ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮವೂ ಬದಲು
ಇ-ಆಧಾರ್ ದೃಢೀಕರಣ ನಿಯಮ ಜಾರಿಗೆ
ಅನಧಿಕೃತ ಬುಕಿಂಗ್ ಗೆ ಲಗಾಮು ಹಾಕಲು ಜಾರಿ
ತತ್ಕಾಲ್ ರೈಲು ಟಿಕೆಟ್ಗಳನ್ನು ಬುಕಿಂಗ್ ಮಾಡಲು ಭಾರತೀಯ ರೈಲ್ವೆ ಕಡ್ಡಾಯ ಇ-ಆಧಾರ್ ದೃಢೀಕರಣ ನಿಯಮ ಜಾರಿಗೆ ತಂದಿದೆ. ಅಗತ್ಯವಿರುವ ನೈಜ ಬಳಕೆದಾರರು ದೃಢೀಕೃತ ಟಿಕೆಟ್ ಪಡೆಯಲು ಈ ಕ್ರಮ ನೆರವಾಗಲಿ ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತದೆ. ಇನ್ನುಮುಂದೆ ತತ್ಕಾಲ್ ಟಿಕೆಟ್ ಬುಕ್ ಮಾಡುವಾಗಲೂ ಇ-ಆಧಾರ್ ವೇರಿಫಿಕೇಷನ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ.
ಒಟ್ನಲ್ಲಿ ರೈಲ್ವೆ ಇಲಾಖೆಯು ಆಧುನೀಕರಣಗೊಳ್ಳುವ ಜತೆಗೆ ಜನರಿಗೆ ಹತ್ತಾರು ಸೇವೆ ನೀಡುತ್ತಿದೆ. ಇದರ ಜತೆಗೆ ಹೊಸ ಹೊಸ ನಿಯಮಗಳನ್ನೂ ಜಾರಿಗೆ ತರುತ್ತಿದೆ. ಇವುಗಳನ್ನು ಪಾಲಿಸೋ ಮೂಲಕ ನಾವೂ ಉತ್ತಮ ನಾಗರಿಕರಾಗೋಣ.