ಬೆಂಗಳೂರು: ತಂದೆ ತಾಯಿ ಇಲ್ಲ ಎಂದು ದತ್ತು ಪಡೆದು ಸಾಕಿದರೆ, ಆತ ಮಾತ್ರ ದೊಡ್ಡಮ್ಮನ ಮನೆಯಲ್ಲಿ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.
ಬೆಂಗಳೂರಿನ ಗಿರಿನಗರ ಪೊಲೀಸರು ಈ ನಯ ವಂಚಕನನ್ನು ಬಂಧಿಸಿದ್ದಾರೆ. ಪ್ರಥಮ್ ಬಂಧಿತ ಆರೋಪಿ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆಹಳ್ಳಿಯ ಡಾ. ಶಾಂತಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ವೇಳೆ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆನಂತರ ತಂಗಿಯ ಮಗ ಕೂಡ ಬಂದು ಹೋಗಿರುವುದು ಗೊತ್ತಾಗಿತ್ತು.
ಆದರೆ, ಆತ ಇತ್ತೀಚೆಗೆ ಚೆನ್ನೈಗೆ ತೆರಳಿ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಆನಂತರ ಆತನ ಬ್ಯಾಂಕ್ ಡಿಟೇಲ್ಸ್ ಪರಿಶೀಲನೆ ಮಾಡಿದಾಗ ಆತನ ಅಕೌಂಟ್ ಗೆ ಹಣ ಬಂದಿರುವುದು ಗೊತ್ತಾಗಿದೆ. ಏಕಾಏಕಿ ಇಷ್ಟೊಂದು ಹಣ ಬರಲು ಹೇಗೆ ಸಾಧ್ಯ ಎಂದು ಪೊಲೀಸರು ತನಿಖೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ವೈದ್ಯೆ ಶಾಂತಿ ಅವರ ಸಹೋದರಿ ಮಕ್ಕಳು ಇಲ್ಲ ಎಂಬ ಕಾರಣಕ್ಕೆ ಪ್ರಥಮ್ ನನ್ನು ದತ್ತು ಪಡೆದು ಸಾಕಿದ್ದರು. ಸ್ವಂತ ಮಗನಂತೆ ಚೆನ್ನಾಗಿ ಸಾಕಿ ಬಿಬಿಎ ಸಹ ಓದಿಸಿದ್ದರು. ಆರೋಪಿ ಕೂಡ ಆಗಾಗ ದೊಡ್ಡಮ್ಮನ ಮನೆಗೆ ಹೋಗಿ ಬರುತ್ತಿದ್ದ. ಒಮ್ಮೆ ಡಾ. ಶಾಂತಿ ಮುಂಬೈಗೆ ಹೋಗಿದ್ದ ವೇಳೆ ಪ್ರಥಮ್ ನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಕಳ್ಳತನ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯಿಂದ 258 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.