ಬೆಂಗಳೂರು: ರಕ್ತದಲ್ಲಿ ಬೇಕಾದರೆ ಬರೆದು ಕೊಡುತ್ತೇನೆ, ಡಿಸಿಎಂ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಹೇಳಿದ್ದಾರೆ.
ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಡಿಕೆಶಿ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಅವರಿಗೆ ಆ ಸಾಮರ್ಥ್ಯವಿದೆ. ಮುಖ್ಯಮಂತ್ರಿ ಹುದ್ದೆಯನ್ನು ಅವರು ಸಂಪಾದನೆ ಮಾಡಿದ್ದಾರೆ ಎಂದರೆ, ಇತ್ತ ಶಾಸಕ ಬಸವರಾಜ್ ಶಿವಗಂಗಾ ರಕ್ತದಲ್ಲಿ ಬೇಕಾದರೆ ಬರೆದು ಕೊಡುತ್ತೇನೆ. ಡಿ.ಕೆ. ಶಿವಕುಮಾರ್, ಡಿಸೆಂಬರ್ ವೇಳೆಗೆ ಸಿಎಂ ಆಗುತ್ತಾರೆ ಎಂದಿರುವುದು ಅಚ್ಚರಿ ಹುಟ್ಟಿಸಿದೆ.
ಉರಿಯುವ ಬೆಂಕಿಗೆ ತುಪ್ಪ ಸುರಿದ್ರಾ ಶಾಸಕರು?
ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಸಿಎಂ ಬದಲಾವಣೆ ವಿಚಾರ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಮೊದಲ ಎರಡುವರೆ ವರ್ಷಗಳ ಕಾಲ ಸಿಎಂ ಸ್ಥಾನದಲ್ಲಿ ಸಿದ್ಧರಾಮಯ್ಯ ಇರಲಿದ್ದಾರೆ. ಬಳಿಕ ಎರಡುವರೆ ವರ್ಷಗಳ ಕಾಲ ಡಿ.ಕೆ.ಶಿವಕುಮಾರ್ ಆ ಸ್ಥಾನಕ್ಕೇರಲಿದ್ದಾರೆ ಎಂಬ ಚರ್ಚೆಗಳು ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸಕ ಬಸವರಾಜ್ ಶಿವಗಂಗಾ ರಕ್ತದಲ್ಲಿ ಬರೆದು ಕೊಡುತ್ತೇನೆ. ಡಿಸೆಂಬರ್ ವೇಳೆಗೆ ಡಿಕೆಶಿ ಸಿಎಂ ಆಗುವುದು ನಿಶ್ಚಿತ ಎಂದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸಿಎಂ ಆಗಿಯೇ ಆಗುತ್ತಾರೆ ಡಿಕೆಶಿ
ಹಾಲಿ ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ತೀರುತ್ತಾರಾ? ಎಂಬ ಪ್ರಶ್ನೆಗೆ ಕಾಲವೇ ಉತ್ತರ ಕೊಡಬೇಕಾದ ವಾತಾವರಣ ನಿರ್ಮಾಣ ಆಗಿದೆ. 2023 ರ ರಟಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬರೋಬ್ಬರಿ 135 ಕ್ಷೇತ್ರಗಳಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತಂದಂತಹ ಕೀರ್ತಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾಲಿದ್ದು, ಇದಕ್ಕೆ ಹೈಕಮಾಂಡ್ ನಾಯಕರು ಸಿಎಂ ಕೊಡುವ ಮೂಲಕ ಋಣ ತೀರಿಸುತ್ತಾರಾ? ಅಥವಾ ಸಿಎಂ ಸ್ಥಾನದಲ್ಲಿ ಸಿದ್ಧರಾಮಯ್ಯರೇ ಮುಂದುವರೆಯಲಿ ಅಂತಾರಾ? ಇಲ್ಲ ಸಿದ್ಧರಾಮಯ್ಯರನ್ನು ಬದಲಾಯಿಸಿ ಬೇರೆ ಯಾರಿಗಾದ್ರೂ ಅವಕಾಶ ಕೊಡುತ್ತಾರಾ? ಕಾದು ನೋಡಬೇಕಾಗಿದೆ.