ಬೆಂಗಳೂರು: ಉಳಿಯಿಂದ ಹೊಡೆದು ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಬಾಣಸವಾಡಿಯ ಬಚ್ಚಪ್ಪ ಲೇಔಟ್ ನಲ್ಲಿ ಬಡಗಿ ಕೆಲಸ ಮಾಡಿಕೊಂಡಿದ್ದ ರಮೇಶ್ ತನ್ನ ಎರಡನೇ ಪತ್ನಿಯನ್ನ ಕ್ಷುಲ್ಲಕ ವಿಚಾರಕ್ಕೆ ಕೊಂದು ತಾನೇ ಬಂದು ಖಾಕಿ ಮುಂದೆ ಶರಣಾಗಿದ್ದಾನೆ.

ವೃತ್ತಿಯಲ್ಲಿ ಬಡಗಿಯಾಗಿರುವ ರಮೇಶ್ ಎರಡು ಮದುವೆಯಾಗಿದ್ದ. ಮೊದಲ ಪತ್ನಿ ಬಿಟ್ಟು ಎರಡನೇ ಪತ್ನಿ ಕಲೈಮಣಿ ಜೊತೆ ಬಾಣಸವಾಡಿಯ ಜಯಲಕ್ಷ್ಮೀ ಶಾಲೆ ಬಳಿ ವಾಸವಿದ್ದ. ನಿನ್ನೆ, ಮೊದಲ ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ನೋಡಲು ರಮೇಶ್ ತೆರಳಿದ್ದ. ಬಳಿಕ ಮನೆಗೆ ಹಿಂದಿರುಗುತ್ತಿದ್ದಂತೆ ಈ ಭೇಟಿ ವಿಚಾರವಾಗಿ ಎರಡನೇ ಪತ್ನಿ ಕಲೈಮಣಿ ಕ್ಯಾತೆ ತೆಗೆದಿದ್ದಾಳೆ.
ಪತಿ-ಪತ್ನಿ ನಡುವೆ ಜಗಳ ತಾರಕ್ಕೇರಿದೆ. ಒಂದು ಹಂತದಲ್ಲಿ ಕಲೈವಾಣಿ ಏರುಧ್ವನಿಯಲ್ಲಿ ಅವಾಚ್ಯ ಪದಗಳಿಂದ ಮಾತನಾಡಿದ್ದು, ರಮೇಶ್ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಅಲ್ಲೇ ಇದ್ದ ಉಳಿ ತೆಗೆದುಕೊಂಡು ಕಲೈಮಣಿ ಮೇಲೆ ದಾಳಿ ಮಾಡಿದ್ದಾನೆ. ಅಷ್ಟೇ, ರಮೇಶ್ ನ ಕೋಪಕ್ಕೆ ಕಲೈಮಣಿ ಬಲಿಯಾಗಿದ್ದಾಳೆ. ಇನ್ನು ಕೊಲೆ ಮಾಡಿದ ಬಳಿಕ ರಮೇಶ್ ಬೆಳಗಿನ ಜಾವ ನಾಲ್ಕರ ಹೊತ್ತಿಗೆ ನೇರ ಬಾಣಸವಾಡಿ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.