ಬೆಂಗಳೂರು: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಿಲಿಕಾನ್ ಸಿಟಿಯಲ್ಲಿ ನೂರಾರು ಮರಗಳು ಧರಾಶಾಹಿಯಾಗಿದ್ದು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಗರದ ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಮರಗಳು ಅನಾಹುತವಾಗಿವೆ. ಪ್ರಸ್ತುತ ಮಳೆಗಾಲದಲ್ಲಿ ಇಲ್ಲಿಯವರೆಗೆ ಒಟ್ಟು 136 ಮರಗಳು ಧರಾಶಾಹಿಯಾಗಿವೆ. 233 ಕೊಂಬೆಗಳು ನೆಲಕ್ಕಚ್ಚಿವೆ. ಇನ್ನಿತರ ವಲಯಗಳನ್ನು ಹೊಲಿಸಿದರೆ ದಕ್ಷಿಣ ವಲಯದಲ್ಲೇ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ ಎನ್ನಲಾಗಿದೆ.
ಮರ ಬಿದ್ದಿರುವುದರಿಂದ ಅನಾಹುತಗಳು ಕೂಡ ನಡೆದಿವೆ. ಇತ್ತೀಚೆಗೆ ನಡೆದ ಆರು ಪ್ರಕರಣಗಳ ಪೈಕಿ ದಕ್ಷಿಣ ವಲಯ ಒಂದರಲ್ಲೇ ನಾಲ್ಕು ದುರಂತಗಳು ಸಂಭವಿಸಿವೆ. ನಾಲ್ಕರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಯ ಕಾಲಿಗೆ ಪೆಟ್ಟಾಗಿದೆ. ಮತ್ತೋರ್ವ ವ್ಯಕ್ತಿ ತಲೆ ಬುರುಡೆಗೆ ಪೆಟ್ಟಾಗಿದೆ.
ಇದನ್ನು ಗಮನಿಸಿದರೆ ಪಾಲಿಕೆಯ ದಕ್ಷಿಣ ವಲಯದಲ್ಲಿ ಇರುವ ಮರಗಳು ಡೇಂಜರ್ ಝೋನ್ ನಲ್ಲಿವೆಯೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇನ್ನೂ ಹಲವು ಮರಗಳು ಒಣಗಿದ್ದು, ಮತ್ತಷ್ಟು ಬಲಿ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ. ದುರಂತಗಳು ಸಂಭವಿಸುವ ಮೊದಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಬದುಕಿಗೆ ಆಸರೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.